
ಕೃಷ್ಣಮಠದಲ್ಲಿ ವಂಚಿಸಿ ಆತಿಥ್ಯ ಸ್ವೀಕರಿಸಿದಾತನಿಗೆ ಜಾಮೀನು
ಉಡುಪಿ: ಪ್ರಧಾನ ಮಂತ್ರಿ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ನಂಬಿಸಿ ಕೃಷ್ಣ ಮಠದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ಆರೋಪಿಗೆ ಉಡುಪಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ.
ಆರೋಪಿ ಉದಯ ಕುಮಾರ್ ಎಂಬಾತ ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ಶ್ರೀಕೃಷ್ಣ ಮಠದ ದಿವಾನ ನಾಗರಾಜ ಆಚಾರ್ಯ ಅವರಿಗೆ ಕರೆ ಮಾಡಿ, ತಾನು ಕುಟುಂಬ ಸಮೇತ ಉಡುಪಿ ಕೃಷ್ಣಮಠದ ದರ್ಶನಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕೋರಿಕೊಂಡಿದ್ದ.
ಅದರಂತೆ ಅ.10ರಂದು ಬೆಳಿಗ್ಗೆ ಇನ್ನೋವಾ ಕ್ರಿಸ್ಟಾ ವಾಹನದ ಮುಂಭಾಗದ ಬೋನೆಟ್ ಮೇಲೆ ಕೆಂಪು ಅಕ್ಷರದಲ್ಲಿ ‘ಗವರ್ನಮೆಂಟ್ ಆಫ್ ಇಂಡಿಯಾ’ ಹಾಗು ಹಿಂಬದಿಯ ಗ್ಲಾಸಿನಲ್ಲಿ ಆರ್ಮಿ ಎಂಬುದಾಗಿ ಬರೆದಿದ್ದ ವಾಹನದಲ್ಲಿ ಬಂದ ಆತನಿಗೆ ಕೇಂದ್ರ ಅಧೀನ ಕಾರ್ಯದರ್ಶಿಗಳಿಗೆ ಕಲ್ಪಿಸುವ ಎಲ್ಲಾ ವ್ಯವಸ್ಥೆ ಕಲ್ಪಿಸಿ, ವಿಶೇಷ ದರ್ಶನ ಮಾಡಿಸಿದ್ದರು.
ನಂತರದಲ್ಲಿ ಆತನ ಚಲನವಲನದ ಮೇಲೆ ಸಂಶಯಗೊಂಡ ದಿವಾನರು, ಪ್ರಧಾನ ಮಂತ್ರಿ ಕಾರ್ಯಾಲಯದ ವೆಬ್ಸೈಟ್ ಪರಿಶೀಲಿಸಿದಾಗ ಆತ ಸುಳ್ಳು ಮಾಹಿತಿ ನೀಡಿದ್ದಾಗಿ ತಿಳಿದು, ಸರಕಾರಿ ಅಧಿಕಾರಿ ಎಂಬ ಸೋಗಿನಲ್ಲಿ ಕೃಷ್ಣಮಠಕ್ಕೆ ಬಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಉದಯ ಕುಮಾರ್ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಆರೋಪಿಯ ಪರವಾಗಿ ಉಡುಪಿ ವಕೀಲ ಚೇರ್ಕಾಡಿ ಅಖಿಲ್ ಬಿ. ಹೆಗ್ಡೆ ವಾದಿಸಿದ್ದರು.