ಏಕಾಏಕಿ ಉಕ್ಕಿಹರಿದ ನದಿಗಳಿಂದ ಪ್ರವಾಹ
Wednesday, October 9, 2024
ಉಜಿರೆ: ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ಹಾಗೂ ದಿಡುಪೆ ಕಡೆಯಿಂದ ಹರಿಯುವ ನೇತ್ರಾವತಿ ನದಿಗಳು ಮಂಗಳವಾರ ಸಂಜೆ ಏಕಾಏಕಿ ಉಕ್ಕಿ ಹರಿದ ಘಟನೆ ನಡೆಯಿತು.
ಚಾರ್ಮಾಡಿ, ದಿಡುಪೆ ಭಾಗದಲ್ಲಿ ಭಾರಿ ಮಳೆ ಇಲ್ಲದಿದ್ದರೂ ಏಕಾಏಕಿ ನದಿಗಳಲ್ಲಿ ನೀರು ಉಕ್ಕಿ ಹರಿದಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಯಿತು. ಸ್ಥಳೀಯರು ಹೇಳುವ ಪ್ರಕಾರ 2019ರ ನೆರೆಯ ಬಳಿಕ ಮಂಗಳವಾರ ರಾತ್ರಿ ಅತಿಹೆಚ್ಚಿನ ನೀರು ನದಿಗಳಲ್ಲಿ ಹರಿದಿದೆ. ಈ ವರ್ಷ ಎರಡು ನದಿಗಳು ಆಗಾಗ ಉಕ್ಕಿಹರಿದರೂ ಇಷ್ಟೊಂದು ಪ್ರಮಾಣದ ನೀರು ಹರಿದಿರಲಿಲ್ಲ. ಸಂಜೆ 7 ಗಂಟೆ ಬಳಿಕ ಏರ ತೊಡಗಿದ ನೀರು, ರಾತ್ರಿ 9ರ ವರೆಗೂ ಏರಿಕೆ ಕಂಡಿದ್ದು ಬಳಿಕ ಇಳಿಕೆಯಾಗುತ್ತಿದ್ದು, ಸ್ಥಳೀಯರ ಆತಂಕ ದೂರವಾಗಿದೆ. ನೆರಿಯ ಹೊಳೆ ಉಕ್ಕಿ ಹರಿದು ನೆರಿಯದ ಪಂಪ್ಹೌಸ್ ಬಳಿ ಸೇತುವೆ ಮೇಲೆ ನೀರು ಹರಿದಿದೆ.