
ಉಜಿರೆಯ ಎಸ್ಡಿಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಉದ್ಘಾಟನೆ
Wednesday, October 30, 2024
ಉಜಿರೆ: ಸಂಘಟನೆಗಳಿಂದ ವ್ಯಕ್ತಿ ಮತ್ತು ಸಮಾಜ ಗಟ್ಟಿಗೊಳ್ಳುತ್ತದೆ. ಸಂಘಟನೆಗಳಲ್ಲಿ ತೊಡಗಿಕೊಳ್ಳುವ ಮುಖೇನ ಸಮಾಜ ಹಾಗೂ ಸಂಸ್ಥೆಗಳಲ್ಲಿ ನಾವು ಗುರುತಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸಂಸ್ಥೆಗಳಲ್ಲಿ ಸಂಘಟನೆಯು ಉದ್ಯೋಗಿಗಳ ಮಾನಸಿಕ ಸಾಮರ್ಥ್ಯವನ್ನು ದೃಢಗೊಳಿಸುತ್ತದೆ ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.
ಅವರು ಎಸ್ಡಿಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸಂಘಗಳ ಸ್ಥಾಪನೆಯ ಉದ್ದೇಶ ಸಮಾಜ ಮುಖಿಯಾಗಿರಬೇಕು. ಸಂಘಗಳ ಚಟುವಟಿಕೆಗಳು ಸಂಸ್ಥೆ ಹಾಗೂ ಉದ್ಯೋಗಿಗಳ ಅಭಿವೃದ್ಧಿಗೆ ಪೂರಕವಾಗಿರಬೇಕು ಆಗ ಮಾತ್ರ ಸಂಘಟನೆಗಳ ಸ್ಥಾಪನೆ ಸಾರ್ಥಕವಾಗುತ್ತದೆ ಎಂದರು.
ಎಸ್ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಶ್ವನಾಥ್ ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಸಂಘದ ನೂತನ ಅಧ್ಯಕ್ಷ ಪ್ರಮೋದ್ ಕುಮಾರ್ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಪ್ರಾಚಾರ್ಯ ಹಾಗೂ ಸಂಘದ ನೂತನ ಕಾರ್ಯದರ್ಶಿ ಡಾ. ರಾಜೇಶ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಸಂಘದ ಕೋಶಾಧಿಕಾರಿ ಬೇಬಿ, ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ನೂತನ ಜೊತೆ ಕಾರ್ಯದರ್ಶಿ ಮಹಾವೀರ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.