
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟ ಉದ್ಘಾಟನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದಲ್ಲಿ ಹಾಗೂ ದೈಹಿಕ ಶಿಕ್ಷಣ ಇಲಾಖೆ ಮತ್ತು ಒಳಗೊಣ ಗುಣಾತ್ಮಕ ಭರವಸೆ ಕೋಶದ ಆಶ್ರಯದಲ್ಲಿ, ಶ್ರೀಮಂತ ಆದರಣೀಯ ಮೊನ್. ಅ. ಪಾಟ್ರಾವ್ ಸ್ಮಾರಕ ಟ್ರೋಫಿಗಾಗಿ ಎರಡು ದಿನದ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಇಂದು ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಅವರು ಈ ಪಂದ್ಯಾಟವನ್ನು ಉದ್ಘಾಟಿಸಿ, ಮಾತನಾಡಿ, ದೇಶದ ಮಣ್ಣಿನ ಆಟ ಕಬಡ್ಡಿ, ಆಟದಲ್ಲಿ ಸೋಲು ಗೆಲುವು ಎರಡನ್ನು ಸಮವಾಗಿ ಸ್ವೀಕರಿಸುವುದು ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಯುವ ಶಕ್ತಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜಾ ಮಾತನಾಡಿ, ಸರಕಾರದಿಂದ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹ ಅಪಾರ ಇದರ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ, ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಮಾಜಿ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಬಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದ್ದಲ್ಲಿ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಬಹುದು. ಜೊತೆಗೆ ವಿದ್ಯಾರ್ಥಿಗಳಿಗೆ ಪರಿಶ್ರಮ ಅತೀ ಮುಖ್ಯ ಜೊತೆಗೆ ತಂಡಶಕ್ತಿಯು ಮತ್ತು ಸಹನೆಯು ಹೇಗೆ ಬೆಳೆಯುತ್ತದೆ ಎಂಬುದರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಬೆಸಂಟ್ ಮಹಿಳಾ ಕಾಲೇಜಿನ ಉಪಾಧ್ಯಕ್ಷೆ ಹಾಗೂ ಡಬ್ಲೂಎನ್ಇಎಸ್ನ ಸಂಚಾಲಕಿ ಡಾ. ಮಂಜುಳಾ ಕೆ.ಟಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಗವಹಿಸುವವರಲ್ಲಿ ಕ್ರೀಡಾತ್ಮಕ ಮನೋಭಾವವನ್ನು ಬೆಳೆಸಲು ಪ್ರೋತ್ಸಾಹಿಸಿದರು ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆಯನ್ನು ಬಳಸುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, ಡಬ್ಲೂಎನ್ಇಎಸ್ನ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಐಕ್ಯೂಎಸಿ ಸಂಯೋಜಕ ಡಾ. ಸತೀಶ ಕೆ, ಡಬ್ಲೂಎನ್ಇಎಸ್ನ ಕಾರ್ಯದರ್ಶಿ ಸುರೇಶ್ ಪೈ ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ., ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಗೇರಾಲ್ಡ್ ಸಂತೋಷ್ ಡಿ’ಸೋಜಾ, ಕಾಲೇಜಿನ ದೈಹಿಕ ನಿರ್ದೇಶಕಿ ರೂಪತಿ ಎಮ್., ಸದಸ್ಯರಾದ ಡಾ. ಲೋಕರಾಜ್ ವಿ.ಎಸ್. ಮತ್ತು ಕ್ರೀಡಾ ಕಾರ್ಯದರ್ಶಿ ರಚನಾ ಕೋಟ್ಯಾನ್ ಉಪಸ್ಥಿತರಿದ್ದರು.