
ಅಂಗಾಂಗ ದಾನ: ಸಚಿವ ಗುಂಡೂರಾವ್ ಶ್ಲಾಘನೆ
Friday, November 15, 2024
ಮಂಗಳೂರು: ಮಂಗಳೂರಿನ ಯುವ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಫುಡ್ ಅಲರ್ಜಿ ಹಿನ್ನೆಲೆಯ ಅಪರೂಪದ ಕಾಯಿಲೆಯಿಂದ ಮೃತಪಟ್ಟಿದ್ದು ದುರ್ದೈವದ ಸಂಗತಿ. ಆದರೆ ಆಕೆ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಸಂದೇಶ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ಲಾಘಿಸಿದ್ದಾರೆ.
ಗ್ಲೋರಿಯಾ ಅವರು ತಮ್ಮ ಕಣ್ಣು, ಹೃದಯ, ಯಕೃತ್, ಕಿಡ್ನಿ, ಶ್ವಾಸಕೋಶ ಮತ್ತು ಚರ್ಮವನ್ನು ದಾನ ಮಾಡುವ ಮೂಲಕ ಅಭಿನಂದನಾರ್ಹರಾಗಿದ್ದಾರೆ. ನೋವಿನಲ್ಲಿಯೂ ಸಾರ್ಥಕತೆ ಮೆರೆದ ಅವರ ಕುಟುಂಬಸ್ಥರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂಗಾಂಗ ದಾನದ ಮೂಲಕ ಗ್ಲೋರಿಯಾ ಹಲವರ ಬದುಕಿಗೆ ಬೆಳಕಾಗಿದ್ದಾರೆ. ನಾವೆಲ್ಲರೂ ಇಂತಹ ಮಹತ್ಕಾರ್ಯದಲ್ಲಿ ತೊಡಗಲು ಸ್ಫೂರ್ತಿಯಾಗಿದ್ದಾರೆ. ಎಲ್ಲಾರು ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡು ಇನ್ನೊಬ್ಬರ ಬದುಕಿಗೆ ಬೆಳಕಾಗಬೇಕು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.