
ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಶಾಸಕ ಕಾಮತ್
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ನಡೆಸಿ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು.
ರಾಜ್ಯ ಸರ್ಕಾರ ಅನುದಾನ ತಡೆ ಹಿಡಿದ ಪರಿಣಾಮ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಗಳಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ, ಹಕ್ಕುಪತ್ರಗಳ ಸಮಸ್ಯೆ, ಸಂಜೆ ಹಾಗೂ ರಾತ್ರಿ ಹೊತ್ತಲ್ಲಿ ಸಂಚರಿಸುವ ಮಹಿಳೆಯರ-ನಾಗರಿಕರ ಸುರಕ್ಷತೆಗಾಗಿ ಕ್ಷೇತ್ರದ ವಿವಿಧೆಡೆ ಸ್ಟ್ರೀಟ್ ಲೈಟ್, ಹೈಮಾಸ್ಕ್ ದೀಪ ಅಳವಡಿಕೆ, ಸರ್ಕಾರ-ಪಾಲಿಕೆ ವಿವಿಧ ಯೋಜನೆಗಳಡಿಯಲ್ಲಿ ಮನೆ ದುರಸ್ತಿಗೆ ಸಹಾಯ ಸೇರಿದಂತೆ ಸುಮಾರು 60ಕ್ಕೂ ಅಧಿಕ ಸಾರ್ವಜನಿಕರಿಂದ ಅಹವಾಲುಗಳು ಬಂದಿದ್ದವು. ಕೆಲವೊಂದು ಸಮಸ್ಯೆಗಳಿಗೆ ಶಾಸಕರು ಸ್ಥಳದಲ್ಲೇ ಪರಿಹಾರ ಸೂಚಿಸಿ ಇನ್ನುಳಿದವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾರ್ವಜನಿಕರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರಕ್ಕೆ ಬಿಡಿಗಾಸು ಅನುದಾನ ಸಿಕ್ಕಿಲ್ಲ, ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನೂ ಸಹ ತಡೆ ಹಿಡಿಯಲಾಗಿದೆ. ಇದರಿಂದಾಗಿ ರಸ್ತೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲೂ ಹಿನ್ನಡೆಯುಂಟಾಗಿದೆ. ಹೀಗಾದರೆ ಕ್ಷೇತ್ರದ ಜನರ ನ್ಯಾಯಯುತ ಆಶೋತ್ತರಗಳನ್ನು ಈಡೇರಿಸುವುದು ಹೇಗೆ? ಕ್ಷೇತ್ರದ ಜನರ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರದ ಈ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಕಾಮತ್ ತಿಳಿಸಿದರು.