ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಯುವಕ
ಮೂಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷಿ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸ್ತವ್ಯವಿದ್ದ ಯುವಕನೋರ್ವ ಪತ್ನಿ ಮಗುವನ್ನು ಹತ್ಯೆಗೈದು ತಾನೂ ರೈಲಿನಡಿ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದ್ದು, ಪತ್ನಿ ಪ್ರಿಯಾಂಕ (28) ಮಗು ಹೃದಯ್ (4) ಹತ್ಯೆಗೀಡಾದ ದುರ್ದೈವಿಗಳು ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಕಾರ್ತಿಕ್ ತಂದೆ ಪಕ್ಷಿಕೆರೆ ಜಂಕ್ಷನ್ ಬಳಿಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದು ತಂದೆ ತಾಯಿ ಹೋಟೆಲ್ಗೆ ಹೋದ ಬಳಿಕ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಕಿಟಿಕಿಯ ಗಾಜಿನ ತುಂಡಿನಿಂದ ಹತ್ಯೆಗೈದು ಬಳಿಕ ಕಾರ್ತಿಕ್ ಭಟ್ ಪಡುಪಣಂಬೂರು ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದ ಬಳಿ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣದ ವಿವರ:
ಶುಕ್ರವಾರ ಮಧ್ಯಾಹ್ನ ಯುವಕನೋರ್ವ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡ ಯುವಕನ ಸ್ಕೂಟರ್ ಬೆಳ್ಳಾಯರು ಸಮೀಪ ಕಲ್ಲಾಪು ಎಂಬಲ್ಲಿ ಪತ್ತೆಯಾಗಿದ್ದು ,ಮೃತ ಯುವಕನ ಕಿಸೆಯಲ್ಲಿ ಬೀಗದ ಕೈ ಮುಖಾಂತರ ಮೃತನ ಬಗ್ಗೆ ಮಾಹಿತಿ ತಿಳಿದು ಬಂದು ಪಕ್ಷಿಕೆರೆಯಲ್ಲಿರುವ ಕಾರ್ತಿಕ್ ಭಟ್ನ ಮನೆಯ ಕೋಣೆಯ ಬೀಗದ ಕೈ ತೆಗೆದುಕೊಂಡು ನೋಡುವಾಗ ಕೋಣೆಯೊಳಗೆ ಕಾರ್ತಿಕ್ ಭಟ್ನ ಪತ್ನಿ ಪ್ರಿಯಾಂಕ ಹಾಗೂ ಮಗು ಹೃದಯ್ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ ಕೂಡಲೇ ಸ್ಥಳೀಯರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಕ್ಷಿಕೆರೆಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿರುವ ಜನಾರ್ಧನ ಭಟ್ ಹಾಗೂ ಶಾಮಲಾ ದಂಪತಿಗಳಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದು ಪುತ್ರ ಕಾರ್ತಿಕ್ ಭಟ್ ಕಳೆದ ಆರು ವರ್ಷಗಳ ಹಿಂದೆ ಪ್ರಿಯಾಂಕ ಜೊತೆ ವಿವಾಹವಾದ ಬಳಿಕ ಮನೆಯಲ್ಲಿ ತಂದೆ ತಾಯಿ ಜೊತೆ ಸಣ್ಣ ಪುಟ್ಟ ಮನಸ್ತಾಪವಿದ್ದು ಮಾತುಕತೆ ಕಡಿಮೆ ಮಾಡಿದ್ದ ಹಾಗೂ ಕೆಲ ವರ್ಷಗಳ ಹಿಂದೆ ಸುರತ್ಕಲ್ ಸೊಸೈಟಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಬಳಿಕ ಆನ್ಲೈನ್ನಲ್ಲಿ ವ್ಯವಹಾರ ನಡೆಸುತ್ತಿದ್ದ ಎಂದು ಮನೆಯವರು ಹೇಳುತ್ತಾರೆ.
ಹತ್ಯೆಗೀಡಾದ ಮಗು ಹೃದಯ್ ಸುರತ್ಕಲ್ ನರ್ಸಿಂಗ್ ಸ್ಕೂಲ್ಗೆ ಸೇರಿಸಿದ್ದು ಸ್ವತಹ ಕಾರ್ತಿಕ್ ಭಟ್ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಪರಿಸರದ ಜನರ ಜೊತೆ ಒಳ್ಳೆಯ ಒಡನಾಟವಿದ್ದ ಕಾರ್ತಿಕ್ ಭಟ್ ಕುಟುಂಬದ ಸಂಶಯಾತ್ಮಕ ಭೀಕರ ಕೊಲೆ ಪಕ್ಷಿಕೆರೆ ಗ್ರಾಮೀಣ ಪ್ರದೇಶದ ಜನರನ್ನು ಭಯಭೀತರನ್ನಾಗಿಸಿದೆ.
ಈ ನಡುವೆ ಕಾರ್ತಿಕ್ ಭಟ್ ಪತ್ನಿ ಹಾಗೂ ಮಗು ಕೊಲೆಯಾದ ಕೋಣೆಯಲ್ಲಿ ಫ್ಯಾನಿಗೆ ನೇಣು ಹಾಕಿದ್ದು ಕಾಣುತ್ತಿದ್ದು, ಕಾರ್ತಿಕ್ ಭಟ್ ಪತ್ನಿ ಹಾಗೂ ಮಕ್ಕಳನ್ನು ಕೊಲೆಗೈದು ಸ್ವತಹ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆಯೋ ಅಥವಾ ಪತ್ನಿಯ ಹಾಗೂ ಮಗುವನ್ನು ನೇಣಿನಿಂದ ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲನಾಗಿ ಹೊಲೆಗೈದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಅನೂಪ್ ಅಗರ್ವಾಲ್ ಮಾತನಾಡಿ, ಕೊಲೆಯಾದ ಸ್ಥಳದಲ್ಲಿ ಡೆತ್ ನೋಟ್ ದೊರಕಿದ್ದು ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಎಸಿಪಿ ಶ್ರೀಕಾಂತ್, ಡಿಸಿಪಿ ಸಿದ್ದಾರ್ಥ್ ಗೋಯಲ್, ಮೂಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾದರ್ ಬಿ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದು ತೀವ್ರ ತನಿಖೆ ನಡೆಸುತ್ತಿದ್ದಾರೆ.


