ಹಿಟ್ ಆಂಡ್ ರನ್ ಪ್ರಕರಣ: ಬಂಧನ
ಶಿರ್ವ: ಹಿಟ್ ಆಂಡ್ ರನ್ ಮಾಡಿ ಆಟೋ ಚಾಲಕನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಕಾಪು ತಾಲೂಕಿನ ಬೆಳಪು ಮಿಲಿಟರಿ ಕಾಲೊನಿಯಲ್ಲಿ ನ.11ರಂದು ನಡೆದಿದ್ದ ಈ ಅಪಘಾತದ ಪ್ರಕರಣದಲ್ಲಿ ಆಟೋ ಚಾಲಕ ಮಹಮ್ಮದ್ ಹುಸೇನ್ ಮೃತಪಟ್ಟಿದ್ದರು.
ಹುಸೇನ್ ತನ್ನ ದ್ವಿಚಕ್ರ ವಾಹನದಲ್ಲಿ ಪುಂಚಲಕಾಡುನಿಂದ ಬೆಳಪುಗೆ ತೆರಳುತ್ತಿದ್ದರು. ಮರಿಯಾ ಬೇಕರಿ ಬಳಿ ಬರುತ್ತಿದ್ದಂತೆಯೇ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ವಾಹನ ಚಾಲಕ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹುಸೇನ್ ಅವರ ಕಾಲು, ಕೈ, ತಲೆಗೆ ತೀವ್ರ ಗಾಯಗಳಾಗಿತ್ತು. ಮೊದಲಿಗೆ ಅವರನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಪಘಾತಕ್ಕೊಳಗಾದ ಗಾಯಾಳುವಿಗೆ ಸಹಾಯ ಮಾಡದೆ ಅಥವಾ ಪೊಲೀಸರಿಗೆ ಘಟನೆ ಬಗ್ಗೆ ವರದಿ ಮಾಡದೆ ಪ್ರಜ್ವಲ್ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದ. ಅಪಘಾತದ ಭೀಕರತೆಗೆ ಸಾಕ್ಷಿಯಾಗಿದ್ದ ಸಿಸಿ ಟಿವಿ ದೃಶ್ಯಾವಳಿ ನಂತರ ಲಭಿಸಿದ್ದು, ತನಿಖೆಗೆ ನೆರವಾಗಿದೆ.
ಆ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.