ನ.26 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ

ನ.26 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ


ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ.26 ರಿಂದ 30ರ ವರೆಗೆ ನಡೆಯುತ್ತವೆ.

ಧರ್ಮಸ್ಥಳವು ಸರ್ವಧರ್ಮಗಳ ನೆಲೆವೀಡು. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪುಣ್ಯಭೂಮಿ. ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಇಲ್ಲಿ ನಿತ್ಯೋತ್ಸವ. ಇಲ್ಲಿನ ವಿಶಿಷ್ಠವಾದ ನ್ಯಾಯದಾನ, ಆಣೆಮಾತು ತೀರ್ಮಾನದಿಂದ ಅನೇಕ ಕುಟುಂಬಗಳ ಸಾಂಸಾರಿಕ, ವ್ಯವಹಾರ ಸಮಸ್ಯೆಗಳು ಸುಲಲಿತವಾಗಿ, ಸೌಹಾರ್ದಯುತವಾಗಿ ಪರಿಹಾರವಾಗಿ ಎಲರೂ ಪ್ರೀತಿ-ವಿಶ್ವಾಸದಿಂದ ಸುಖ-ಶಾಂತಿಯ ಜೀವನ ನಡೆಸುತ್ತಿದ್ದಾರೆ.

ಮಂಗಳವಾರ ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ. ಮಂಗಳವಾರ ಅಪರಾಹ್ನ ಮೂರು ಗಂಟೆಗೆ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಉಜಿರೆಯಿಂದ ಹೊರಟು ಧರ್ಮಸ್ಥಳಕ್ಕೆ ಭಜನೆ, ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಬರುವರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಪಾದಯಾತ್ರೆಯಲ್ಲಿ ಭಾಗವಹಿಸುವರು. ಬಳಿಕ ಸಂಜೆ 7 ಗಂಟೆಗೆ ಹೆಗ್ಗಡೆಯವರು ಅಮೃತವರ್ಷಿಣಿ ಸಭಾಭವನದಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡುವರು.

ಧರ್ಮಸ್ಥಳದಲ್ಲಿ ದೇವಸ್ಥಾನ, ಬಸದಿ, ವಸತಿಛತ್ರಗಳು, ಪ್ರವೇಶದ್ವಾರ, ಉದ್ಯಾನ ಹಾಗೂ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುದ್ದೀಪಗಳು ಹಾಗೂ ಸ್ವಾಗತ ಫಲಕಗಳನ್ನು ಹಾಕಲಾಗಿದೆ. ನ.26 ರಿಂದ 30ರ ವರೆಗೆ ಪ್ರೌಢಶಾಲಾ ಆವರಣದಲ್ಲಿ ಮುನ್ನೂರಕ್ಕೂ ಮಿಕ್ಕಿ ಮಳಿಗೆಗಳಿರುವ ರಾಜ್ಯಮಟ್ಟದ ಆಕರ್ಷಕ ವಸ್ತುಪ್ರದರ್ಶನ ಆಯೋಜಿಸಿದ್ದು, ಎಲ್ಲರಿಗೂ ಪ್ರವೇಶ ಉಚಿತವಾಗಿದೆ.

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ರಾತ್ರಿ ಹೊಸಕಟ್ಟೆ ಉತ್ಸವ, ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ, ಗುರುವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ ಮತ್ತು ಶನಿವಾರ ರಾತ್ರಿ ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯುತ್ತದೆ. ಪ್ರತಿ ವರ್ಷದಂತೆ ಲಕ್ಷದೀಪೋತ್ಸವದ ದಿನ ಶನಿವಾರ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಧರ್ಮಸ್ಥಳಕ್ಕೆ ಬರುತ್ತಾರೆ.

ಕೆ.ಎಸ್.ಆರ್.ಟಿ.ಸಿ. ನಾಡಿನ ವಿವಿಧ ಊರುಗಳಿಂದ ವಿಶೆಷ ಬಸ್ ಸೌಲಭ್ಯ ಕಲ್ಪಿಸಿದೆ. ಹಲವು ಮಂದಿ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಾರೆ.












Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article