ವಾಹನ ಕಳವು: ಇಬ್ಬರ ಬಂಧನ
ಬೆಳ್ತಂಗಡಿ: ಮಾಲಾಡಿಯಲ್ಲಿ ಇಂಟರ್ಲಾಕ್ ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಂಜಾಲಕಟ್ಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯವರಾದ ಕನಕಪ್ಪ ಯಮನಪ್ಪ ಕ್ಯಾದಗೇರಿ(24) ಹಾಗೂ ರಮೇಶ್ ಚೌಹಾಣ್ (26) ಎಂದು ಗುರುತಿಸಲಾಗಿದೆ.
ಮಾಲಾಡಿ ಗ್ರಾಮದ ಅರ್ತಿಲ ಎಂಬಲ್ಲಿ ಟೆರೆನ್ಸ್ ಜೋಶಲ್ ವೇಗಸ್ ಎಂಬವರಿಗೆ ಸೇರಿದ ಇಂಟರ್ ಲಾಕ್ ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವನ್ನು ಡಿ.2 ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.ಇದೀಗ ಇಬ್ಬರು ಆರೋಪಿಗಳನ್ನು ಬಾಗಲಕೋಟೆಯಲ್ಲಿ ಬಂಧಿಸಿರುವ ಪೊಲೀಸರು ಮೂರು ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್ ರವರ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ರವರ ನೇತೃತ್ವದಲ್ಲಿ, ಪುಂಜಾಲಕಟ್ಟೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಂದ ಕುಮಾರ್ ಎಂ.ಎಂ (ಕಾ&ಸು) & ಓಮನ ಎನ್.ಕೆ (ತನಿಖೆ) ರವರ ಜೊತೆಗೆ ಸಿಬ್ಬಂದಿಗಳಾದ ಸಂದೀಪ್ ಎಸ್, ರಾಹುಲ್ ರಾವ್, ರಜಿತ್, ಸಲೀಂ ಪಟೇಲ್, ಪ್ರಕಾಶ್, ರಮ್ಯ ವೇಣೂರು ಠಾಣಾ ಸಿಬ್ಬಂದಿ ಬಸವರಾಜ್ ಹಾಗೂ ಗಣಕಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ರವರು ಕಾರ್ಯನಿರ್ವಹಿಸಿರುತ್ತಾರೆ.