
ಭಾಷೆ ಮತ್ತು ಸಾಹಿತ್ಯಕ್ಕೆ ತಂತ್ರಜ್ಞಾನದ ಅತೀ ಅವಲಂಬನೆ ಅಪಾಯ: ಪ್ರೊ. ಮೊರಬದ ಮಲ್ಲಿಕಾರ್ಜುನ
Monday, December 2, 2024
ಧರ್ಮಸ್ಥಳ: ಶಿಕ್ಷಕರು ಹಾಗೂ ಪುಸ್ತಕದ ಅಗತ್ಯವಿಲ್ಲದ ಸ್ಥಿತಿಗೆ ಇಂದಿನ ಮಕ್ಕಳು ತಲುಪಿದ್ದಾರೆ. ಇದರಿಂದ ಭಾಷೆ ಹಾಗೂ ಸಾಹಿತ್ಯವು ಹಿಂದುಳಿಯುತ್ತಿದೆ ಎಂದು ಉಪನ್ಯಾಸಕ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ 92ನೇ ಸಾಹಿತ್ಯ ಸಮ್ಮೇಳನದ ಅಧಿವೇಶನದಲ್ಲಿ ‘ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವ ಮಾರ್ಗೋಪಾಯಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ತಾಂತ್ರಿಕ ಯುಗ ಕುಟುಂಬಗಳನ್ನು ಚಿಕ್ಕದುಗೊಳಿಸುತ್ತಿದೆ. ನಾವು ತುಂಬು ಕುಟುಂಬಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ನಾವು ಬದುಕಿನ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದಷ್ಟು ದುರ್ಬಲರಾಗಿದ್ದೇವೆ. ಆದರೆ, ಸಾಹಿತ್ಯವು ಮಾನಸಿಕ ಆರೋಗ್ಯವುಳ್ಳ ಯುವಕರನ್ನು ಸೃಷ್ಟಿಸುತ್ತದೆ. ಸಾಹಿತ್ಯವು ಇಂದಿನ ಅಗತ್ಯವಾಗಿದೆ ಎಂದರು.
ಸಾಹಿತ್ಯವು ಮನುಷ್ಯನ ಬಾಹ್ಯ ಬದುಕಿಗಿಂತ ಆಂತರಿಕ ಬದುಕಿನ ಅಗತ್ಯವಾಗಿದೆ. ಅದು ಎಲ್ಲಾ ಕಾಲಕ್ಕೂ, ವಯೋಮಾನಕ್ಕೂ ಬೇಕು. ಅಂತಹ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಧರ್ಮಸ್ಥಳ ಮಾಡುತ್ತಿದೆ ಎಂದು ಉಪನ್ಯಾಸಕ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿದರು.