
ಲೋಕಾಯುಕ್ತ ನ್ಯಾಯಮೂರ್ತಿ ದೇವಸ್ಥಾನ ಭೇಟಿ
ಕುಂದಾಪುರ: ಕರ್ನಾಟಕ ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಶುಕ್ರವಾರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದರು. ಅವರ ಪತ್ನಿಯೂ ಜತೆಗಿದ್ದರು.
ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಶ್ರೀ ದೇವರ ಪ್ರಸಾದ ನೀಡಿ ಲೋಕಾಯುಕ್ತ ದಂಪತಿಯನ್ನು ಗೌರವಿಸಿದರು.
ಪರ್ಯಾಯ ಅರ್ಚಕರಾದ ಕೆ. ಕೃಷ್ಣಾನಂದ ಉಪಾಧ್ಯಾಯ ಹಾಗೂ ಸಹೋದರರು ಮತ್ತು ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಂತರ ಲೋಕಾಯುಕ್ತರು ಸಮೀಪದ ಐತಿಹಾಸಿಕ ಕೋಟೇಶ್ವರದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯವನ್ನು ಸಂದರ್ಶಸಿದರು. ಈ ವೇಳೆ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣದೇವ ಕಾರಂತ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಅರ್ಚಕ ವರ್ಗದವರು ಲೋಕಾಯುಕ್ತರನ್ನು ಬರಮಾಡಿಕೊಂಡರು. ಸಮಿತಿಯವರು ಶಾಲು ಹೊದೆಸಿ ಸನ್ಮಾನಿಸಿದರೆ, ಪರ್ಯಾಯ ಅರ್ಚಕ ವಿಶ್ವೇಶ್ವರ ಉಡುಪ ಶ್ರೀ ದೇವರ ಪ್ರಸಾದ ನೀಡಿ ಆಶೀರ್ವದಿಸಿದರು.
ದೇವಾಲಯ ಆಡಳಿತಧಿಕಾರಿಣಿ ಶೋಭಾಲಕ್ಷ್ಮಿ ಜತೆಗಿದ್ದರು. ದೇವಾಲಯದ ಇತಿಹಾಸವನ್ನು ಕೇಳಿ ತಿಳಿದುಕೊಂಡ ಲೋಕಾಯುಕ್ತ ಪಾಟೀಲ್, ನಾಲ್ಕುವರೆ ಎಕ್ರೆ ವಿಸ್ತಾರದ ಜಲರಾಶಿಯ ಕೋಟಿತೀರ್ಥ ಸರೋವರವನ್ನು ವೀಕ್ಷಿಸಿದರು. ನೂತನ ರಜತ ರಥವನ್ನು ನೋಡಿ ಮೆಚ್ಚಿಕೊಂಡರು. ರಥಶಿಲ್ಪಿ ರಾಜಗೋಪಾಲ ಆಚಾರ್ಯ ಈ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ದೇವಾಲಯ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ಅವರು ತಿಳಿದುಕೊಂಡರು. ಉಡುಪಿ ಪೊಲೀಸ್ ಅಧೀಕ್ಷಕರು, ಸಿಬ್ಬಂದಿಗಳು ಇದ್ದರು.