
ಮದುವೆ ನಿಗದಿಯಾಗಿದ್ದ ಯುವಕ ನಾಪತ್ತೆ
Thursday, December 5, 2024
ಕುಂದಾಪುರ: ಮದುವೆ ನಿಗದಿಯಾಗಿದ್ದ ಯುವಕನೊಬ್ಬ ಮದುವೆಗೆ ಕೆಲವೇ ದಿನ ಇರುವಾಗ ತಾಯಿಗೆ ಹುಷಾರಿಲ್ಲವೆಂದು ಹೇಳಿ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟೇಶ್ವರ ಗ್ರಾಮದ ಜಯಲಕ್ಷ್ಮೀ ಎಂಬ ಯುವತಿಯನ್ನು ಕಾರ್ತಿಕ್(28) ಎಂಬ ಯುವಕನಿಗೆ ಮದುವೆ ಮಾತುಕತೆ ಮಾಡಿದ್ದು ಡಿ.5ರಂದು ಮದುವೆ ಆಗುವುದಾಗಿ ನಿಶ್ಚಯವಾಗಿತ್ತು.
ಅದರಂತೆ ಜು.16ರಂದು ಮದುವೆ ನೋಂದಣಿ ಮಾಡಲಾಗಿತ್ತು. ಈ ನಡುವೆ, ಮದುವೆಗೆ ಸಿದ್ಧತೆಯೂ ನಡೆದಿತ್ತು. ಆದರೆ ನ.27ರಂದು ಕಾರ್ತಿಕ್, ತಾನು ಮದುವೆಯಾಗಬೇಕಿದ್ದ ಜಯಲಕ್ಷ್ಮೀಗೆ ಕರೆ ಮಾಡಿ, ಕೋಟೇಶ್ವರದಲ್ಲಿದ್ದೇನೆ, ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿದ್ದರು. ನಂತರ ಅವರು ವಾಪಸ್ಸು ಬಾರದೇ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಕುಂದಾಪುರ ಠಾಣೆಯಲ್ಲಿ ದೂರಲಾಗಿದೆ.
ಯುವಕ 5.6 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಎಡಗೈ ಮೇಲೆ ಮಾರ್ಕ್ ಇದೆ, ಬಲಕಿವಿಯಲ್ಲಿ ಚಿನ್ನದ ರಿಂಗ್ ಇರುತ್ತದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.