
ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಡಿ.4 ರಂದು ಪ್ರತಿಭಟನೆ
ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಡಿ. 4ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ಕಚೇರಿಯವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆ, ಮಿನಿ ವಿಧಾನಸೌಧದ ಎದುರು ನಡೆಯುವ ಪ್ರತಿಭಟನಾ ಸಭೆಗೆ ವಿಶ್ವ ಹಿಂದೂ ಪರಿಷತ್ ಸಂಪೂರ್ಣ ಬೆಂಬಲ ನೀಡಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕಾರ್ಯಕರ್ತರು ಮತ್ತು ಹಿಂದೂಗಳು ಭಾಗವಹಿಸುವಂತೆ ಮನವಿ ಮಾಡುತ್ತೇವೆ ಎಂದು ವಿಶ್ವಹಿಂದು ಪರಿಷತ್ ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದುಗಳನ್ನೇ ಗುರಿಯಾಗಿಟ್ಟುಕೊಂಡು ಇಸ್ಲಾಂ ಮೂಲಭೂತವಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲಿ ಮಕ್ಕಳನ್ನು ಒಳಗೊಂಡಂತೆ ಹಿಂದುಗಳನ್ನು ಬರ್ಬರವಾಗಿ ಹತ್ಯೆ ನಡೆಸುತ್ತಿದ್ದಾರೆ. ಅನೇಕ ಹೆಣ್ಣುಮಕ್ಕಳ ಮಾನ ಅಪಹರಣ, ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ ಅಲ್ಲಿನ ವಿಗ್ರಹಗಳನ್ನು ಅಪವಿತ್ರಗೊಳಿಸುತ್ತಿದ್ದಾರೆ. ಹಿಂದೂಗಳ ಆಸ್ತಿಪಾಸ್ತಿಗಳನ್ನು ನಾಶ ಮಾಡುತ್ತಿದ್ದಾರೆ. ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ್ದ ಇಸ್ಕಾನ್ನ ಸ್ವಾಮೀಜಿ ಚಿನ್ಮೋಯ್ ಕೃಷ್ಣದಾಸ್ ಅವರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಸ್ವಾಮಿಜೀಯ ಆರೋಗ್ಯ ವಿಚಾರಿಸಲು ಆಗಮಿಸಿದ ಇಬ್ಬರು ಸ್ವಾಮಿಜೀಗಳನ್ನು ವಿನಾಕಾರಣ ಬಂಧಿಸಿದ್ದಾರೆ. ಈ ಎಲ್ಲಾ ಕೃತ್ಯಗಳನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಇಸ್ಕಾನ್ ಯಾವುದೇ ಸ್ಥಳದಲ್ಲಿ ರಾಷ್ಟ್ರವಿರೋಧಿ ಕೃತ್ಯ ಎಸಗಿದ ಉದಾಹರಣೆ ಇಲ್ಲ. ಆದರೆ, ಬಾಂಗ್ಲಾದಲ್ಲಿ ನೆರೆ, ಕೋವಿಡ್ ಸಂದರ್ಭ ಅಲ್ಲಿನ ಜನರಿಗೆ ನೆರವು ನೀಡಿದ ಇಸ್ಕಾನ್ ವಿರುದ್ಧ ರಾಷ್ಟ್ರವಿರೋಧಿ ಪ್ರಕರಣ ದಾಖಲಿಸಲಾಗಿದೆ. ಬಾಂಗ್ಲಾದೇಶ ಸ್ವತಂತ್ರ ದೇಶವಾಗಲು ಭಾರತ ಸರಕಾರ ಕಾರಣ. ಭಾರತೀಯರು ಬಾಂಗ್ಲಾದೇಶಕ್ಕೆ ಹಣ, ಬಟ್ಟೆ ನೀಡಿದ್ದಾರೆ. ಆದರೆ, ಇಂದು ಇದೇ ಬಾಂಗ್ಲಾದೇಶ ಹಿಂದು ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳು ಅಭದ್ರತೆಯನ್ನು ಎದುರಿಸುತ್ತಿದ್ದು, ಅಲ್ಲಿನ ಹಿಂದೂಗಳ ಜೀವನ ಮತ್ತು ಆಸ್ತಿಯ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಸರ್ಕಾರವು ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ವಿಚಾರದಲ್ಲಿ ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಜಗತ್ತಿನಲ್ಲಿ ಇತರ ಧರ್ಮೀಯರ ಪರವಾಗಿ ವಿಚಾರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು ಧ್ವನಿ ಎತ್ತುತ್ತಾರೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ವಿಚಾರವಾದಿಗಳು ಈಗ ಎಲ್ಲಿ ಹೋಗಿದ್ದಾರೆ, ಮಂಗಳೂರಿನಲ್ಲಿ ಮತಾಂತರ ಕೇಂದ್ರಗಳ ಮೇಲೆ ದಾಳಿ ಆದಾಗ ಅಮೆರಿಕ ದೇಶ ಮಾತನಾಡಿತ್ತು. ಬಾಂಗ್ಲಾ ಪ್ರಕರಣದಲ್ಲಿ ವಿಶ್ವಸಂಸ್ಥೆಯೂ ಸುಮ್ಮನಿದೆ. ಹಿಂದುಗಳ ನೋವನ್ನು ಸರಕಾರಕ್ಕೆ ತಿಳಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಹಿಂದುಗಳು ಕರ್ತವ್ಯಕ್ಕೆ ರಜೆ ಹಾಕಿ, ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಾಂತ ಸಹ ಸೇವಾಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಭುಜಂಗ ಕುಲಾಲ್, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಗುರುಪ್ರಸಾದ್ ಉಳ್ಳಾಲ ಉಪಸ್ಥಿತರಿದ್ದರು.