ಅಡಿಕೆಯ ಸಮಗ್ರ ಸಂಶೋಧನೆ ನಡೆಸಲು ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕೇಂದ್ರಕ್ಕೆ ಕ್ಯಾಂಪ್ಕೊ ಮನವಿ

ಅಡಿಕೆಯ ಸಮಗ್ರ ಸಂಶೋಧನೆ ನಡೆಸಲು ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕೇಂದ್ರಕ್ಕೆ ಕ್ಯಾಂಪ್ಕೊ ಮನವಿ


ಮಂಗಳೂರು: ಅಡಿಕೆಯ ಸುರಕ್ಷತೆ ಮತ್ತು ಅದರ ಕ್ಯಾನ್ಸರ್ ರೋಗ ಶಮನಗೊಳಿಸುವ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು ಹಾಗೂ ಇದಕ್ಕಾಗಿ ಮುಂಬರುವ ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಅಡಿಕೆ ಕೃಷಿ ಲಕ್ಷಾಂತರ ಬೆಳೆಗಾರರಿಗೆ ಜೀವನಾಧಾರವಾಗಿದೆ. ಭಾರತದ ಸಾಂಸ್ಕೃತಿಕ ಜನಜೀವನದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಡಿಕೆಯು ಮಹತ್ತರ ಪಾತ್ರವನ್ನು ವಹಿಸಿರುವುದರ ಕುರಿತು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಸುಮಾರು 9.55 ಲಕ್ಷ ಹೆಕ್ಟೇರ್‌ಗಳಿಗೆ ಅಡಿಕೆ ಕೃಷಿ ವಿಸ್ತರಿಸಿದ್ದು, ವಾರ್ಷಿಕವಾಗಿ 14 ರಿಂದ 18 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಡಿಕೆಯ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರಕಾರ ಜಿಎಸ್‌ಟಿ ಪದ್ಧತಿ ಜಾರಿಗೊಳಿಸಿದಂದಿನಿಂದ ಈವರೆಗೆ ಬರೇ ಕ್ಯಾಂಪ್ಕೊ ಒಂದೇ ಸಂಸ್ಥೆ ಸುಮಾರು 650 ಕೋಟಿ ರೂ. ತೆರಿಗೆಯನ್ನು ಪಾವತಿ ಮಾಡಿರುವುದರ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಅಡಿಕೆಯನ್ನು ಗುಟ್ಕ ಮತ್ತು ತಂಬಾಕಿನ ಜೊತೆ ಬಳಸುತ್ತಿರುವ ಕಾರಣದಿಂದ ಅದನ್ನು ಕ್ಯಾನ್ಸರ್ ಕಾರಕವೆಂದು ಪರಿಗಣಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ ನ್ಯಾಯೋಚಿತವಾಗಿಲ್ಲವೆಂದು ದಾಖಲೆ ಸಮೇತ ಸಾಬೀತು ಪಡಿಸಲು, ಕ್ಯಾಂಪ್ಕೊ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಿರುವ ಸಂಶೋಧನಾ ವರದಿಗಳನ್ನು ಸಲ್ಲಿಸಿದೆ. ಎಲ್ಲಾ ವರದಿಗಳೂ ಅಡಿಕೆಯ ಉಪಯೋಗ ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಕ್ಯಾನ್ಸರ್‌ನ್ನು ಶನನಗೊಳಿಸುವ ಗುಣಗಳನ್ನು ಹೊಂದಿರುವ ಬಗ್ಗೆ ರುಜುವಾತು ಪಡಿಸಿವೆ. 

ಕೆಲವೊಂದು ಪ್ರಮುಖ ವರದಿಗಳೆಂದರೆ:

*ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಅಮೇರಿಕಾದ ಎಮರಾಯ್ ಯುನಿವರ್ಸಿಟಿ ಮತ್ತು ತೈವಾನ್‌ನ ತೈಪೆ ಮೆಡಿಕಲ್ ಯುನಿವರ್ಸಿಟಿ ಹಾಸ್ಪಿಟಲ್‌ನ ಸಂಶೋಧನೆಗಳು. ಈ ಎಲ್ಲಾ ಸಂಶೋಧನಾ ವರದಿಗಳಲ್ಲಿ ಅಡಿಕೆಯ ಸಾರವು ಕ್ಯಾನ್ಸರ್ ಕಾರಕ ಗೆಡ್ಡೆಗಳ ಬೆಳವಣಿಗೆಯನ್ನು ನಿಯಂತ್ರಿಸುವ ಗುಣಗಳ ಬಗ್ಗೆ ಸಾಕ್ಷೀಕರಿಸಿವೆ.

*ನಿಟ್ಟೆ ಯುನಿವರ್ಸಿಟಿ ಕರ್ನಾಟಕ, ನಡೆಸಿರುವ ಸಮೀಕ್ಷೆಗಳಲ್ಲಿ ಬರೇ ಅಡಿಕೆಯನ್ನು ಉಪಯೋಗಿಸುವ ಜನರಲ್ಲಿ ಬಾಯಿ ಕ್ಯಾನ್ಸರ್‌ನ ಕುರುಹುಗಳು ಕಂಡು ಬಂದಿರುವುದಿಲ್ಲ.

ಭಾರತಲ್ಲಿರುವ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಐಸಿಎಮ್‌ಆರ್, ಐಸಿಎಆರ್, ಎಐಐಎಮ್‌ಎಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್‌ಗಳು ಸಂಯುಕ್ತವಾಗಿ ಅಥವಾ ಪರಸ್ಪರ ಸಹಕಾರದೊಂದಿಗೆ ಅಡಿಕೆಯನ್ನು ನಿರ್ದಿಷ್ಟವಾಗಿ ಅದರ ಮೂಲರೂಪದಲ್ಲೇ ಸಂಶೋಧನೆ ನಡೆಸುವ ಅಗತ್ಯತೆಯ ಕುರಿತು ಕ್ಯಾಂಪ್ಕೊ ಪ್ರಸ್ತಾವನೆ ಸಲ್ಲಿಸಿದೆ. ಕ್ಯಾಂಪ್ಕೊ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರನ್ನು ಚೆನೈನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುತ್ತಾರೆ. ಆ ಸಂದರ್ಭದಲ್ಲಿ ಡಾ. ಸೌಮ್ಯ ಅವರು ಕ್ಯಾಂಪ್ಕೊದ ಪ್ರಸ್ತಾವನೆಯನ್ನು ವಿಶ್ಲೇಷಿಸಿ, ಡಬ್ಲ್ಯೂಹೆಚ್‌ಒ ಅಡಿಕೆಯ ವರ್ಗೀಕರಣವನ್ನು ಪರಾಮರ್ಶಿಸುವ ಅಗತ್ಯತೆ ಬಗ್ಗೆ ಸಹಮತ ಸೂಚಿಸಿದ್ದಾರೆ.

ಅಡಿಕೆಯ ಉಪಯೋಗದ ಬಗ್ಗೆ ನ್ಯಾಯೋಚಿತ ಮತ್ತು ವಸ್ತುನಿಷ್ಠ ಸಂಶೋಧನೆ ನಡೆಸಿ, ಅದರ ಔಷಧೀಯ ಗುಣಗಳ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ದಾಖಲೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಸಬೇಕು. ಆಗ ಲಕ್ಷಾಂತರ ಬೆಳೆಗಾರರ ಬದುಕಿಗೆ ಭರವಸೆಯನ್ನು ಕೇಂದ್ರ ಸರಕಾರ ನೀಡಿದಂತಾಗುತ್ತದೆ. ಸಂಶೋಧನೆಗೆ ಬೇಕಾದ ನಿಧಿಯನ್ನು ಮುಂದಿನ ಬಜೆಟ್ ನಲ್ಲಿ ಹಂಚಿಕೆ ಮಾಡುವಂತೆ ಎಲ್ಲಾ ರೈತರ ಪರವಾಗಿ ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article