
ಕೆಪಿಎಸ್ಸಿ ಪರೀಕ್ಷೆ: ಸುಸೂತ್ರವಾಗಿ ನಡೆದ ಪರೀಕ್ಷೆ
Sunday, December 29, 2024
ಮಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ ಜಿಲ್ಲೆಯ 3 ಕೇಂದ್ರಗಳಲ್ಲಿ ಭಾನುವಾರ ಸುಸೂತ್ರವಾಗಿ ನಡೆಯಿತು.
ಒಟ್ಟು 1445 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದರು. ಬೆಳಗ್ಗೆ ನಡೆದ ಮೊದಲ ಪತ್ರಿಕೆಯ ಪರೀಕ್ಷೆಗೆ 514 ಮಂದಿ ಹಾಜರಾಗಿ, 931 ಮಂದಿ ಗೈರು ಹಾಜರಾಗಿದ್ದರು.
ಅಪರಾಹ್ನ ನಡೆದ 2ನೇ ಪತ್ರಿಕೆಯ ಪರೀಕ್ಷೆಗೆ 510 ಮಂದಿ ಹಾಜರು ಮತ್ತು 935 ಗೈರು ಹಾಜರಾಗಿದ್ದರು. ನಗರದ ವಿಶ್ವವಿದ್ಯಾಲಯ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಸ್ಟ್ರೀಟ್ ಹಾಗೂ ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಿತು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ತೀವ್ರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳನ್ನು ತೀವ್ರ ಪರಿಶೀಲಿಸಿ ಒಳಗೆ ಬಿಡಲಾಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.