
ಸ್ವಚ್ಛತೆಯ ಪಾಠ ಮಾಡಿದ ವೈದ್ಯನಾಥ ದೈವ...
Saturday, December 28, 2024
ಮಂಗಳೂರು: ಕರಾವಳಿಯಲ್ಲಿ ದೈವಾರಾಧನೆ ಪ್ರಕೃತಿಯ ಆರಾಧನೆ ಜೊತೆ ಜೊತೆಯಾಗಿ ನಡೆಯುತ್ತದೆ. ಪ್ರಕೃತಿಯನ್ನೇ ಇಲ್ಲಿ ದೇವರು, ದೈವ ಎಂದು ನಂಬುವ ಹಲವಾರು ಸಂಪ್ರದಾಯ, ಪದ್ಧತಿಗಳು ಇಲ್ಲಿದೆ. ಈ ಪ್ರಕೃತಿಯನ್ನು ಹಾಳುಗೆಡವಿದರೆ ದೈವಗಳು ಕೂಡಾ ಮುಸಿಸುತ್ತದೆ ಎನ್ನುವುದಕ್ಕೊಂದು ನಿದರ್ಶನ ಮಂಗಳೂರಿಗೆ ಹೊರ ವಲಯದ ಕೊಲ್ಯದಲ್ಲಿ ನಡೆದಿದೆ.
ಕೊಲ್ಯದ ಕನಿರುತೋಟದಲ್ಲಿ ದೈವದ ನೇಮ ಆಗುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ಕೆಂಡಾಮಂಡಲವಾದ ವೈದ್ಯನಾಥ ದೈವ ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ ಹೊರಡುವಿಲ್ಲ ಎಂದು ದೈವದ ಸೇವೆ ನಡೆಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದೆ.
ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆಜಾತ್ರೆ ಡಿ.25ರಂದು ನಡೆದಿತ್ತು. ರಾತ್ರಿ ಇಲ್ಲಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು ವಲಸರಿ ಎಂದರೆ ದೈವ ಕಟ್ಟಿದ ನರ್ತಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ನರ್ತನದ ಮೂಲಕ ಸಾಗುವುದು. ದೈವದ ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ. ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿಯೇ ಇದಕ್ಕೆ ಕಾರಣ. ‘ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ?. ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ” ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದೆ. ದೈವದ ಪ್ರಕೃತಿಯ ಮೇಲಿನ ಕಾಳಜಿಗೆ ತಕ್ಷಣ ಎಚ್ಚೆತ್ತ ಆಡಳಿತ ಮಂಡಳಿ ದೈವ ಸಾಗುವ ದಾರಿಯನ್ನು ಶುಚಿಗೊಳಿಸಿದೆ. ದಾರಿ ಶುಚಿಗೊಂಡ ಬಳಿಕ ವೈದ್ಯನಾಥ ದೈವವು ತನ್ನ ವರ್ಷಂಪ್ರತಿ ನಡೆಯುವ ವಲಸರಿಯನ್ನು ನೆರವೇರಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರೆಲ್ ಆಗಿದೆ.