ಪ್ರಕಾಶ್ ಶೆಟ್ಟಿಯವರ ನೆರವು ಕಾರ್ಯಕ್ರಮ ಶ್ಲಾಘನೀಯ: ಡಾ. ತೇಜಸ್ವಿನಿ ಅನಂತಕುಮಾರ್

ಪ್ರಕಾಶ್ ಶೆಟ್ಟಿಯವರ ನೆರವು ಕಾರ್ಯಕ್ರಮ ಶ್ಲಾಘನೀಯ: ಡಾ. ತೇಜಸ್ವಿನಿ ಅನಂತಕುಮಾರ್


ಮಂಗಳೂರು: ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು, ವಿಶೇಷ ಚೇತನ ಮಕ್ಕಳು, ಸಾಮಾಜಿಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಪ್ರಕಾಶ್ ಶೆಟ್ಟಿಯವರ ನೆರವು ಕಾರ್ಯಕ್ರಮ ಶ್ಲಾಘನೀಯ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನಿನ ಅಧ್ಯಕ್ಷೆ ಹಾಗೂ ಸಹ-ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ್ ಹೇಳಿದರು.

ಅವರು 2019ರಿಂದ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ‘ನೆರವು’ ಸಹಾಯಹಸ್ತ ಪ್ರದಾನ ಕಾರ್ಯಕ್ರಮ ಬುಧವಾರ ಸಂಜೆ ಗೋಲ್ಡ್ ಫಿಂಚ್ ಸಿಟಿಯಲ್ಲಿ ಉದ್ಘಾಟಿಸಿ ಮಾತನಾಡಿದರು.


ತಾವೇ ಹುಡುಕಿಕೊಂಡು ಹೋಗಿ ಅರ್ಹರಿಗೆ ನೆರವು ನೀಡುವ ಈ ಕಾರ್ಯಕ್ರಮ ಮಾದರಿಯಾಗಿದೆ. ಇಲ್ಲಿ ಆರ್ಥಿಕ ಸಹಾಯ ಪಡೆದಿರುವ ಮಕ್ಕಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ ಎಂದರು. 

ನಮ್ಮ ದೇಶದಲ್ಲಿ ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು ನಾವು ನೋಡಿ ಕಲಿಯಬೇಕು. ಆದರೆ ನಮ್ಮಲ್ಲಿ ನಾವು ನಮ್ಮ ಮಕ್ಕಳು ಕೂಡ ಬ್ರಿಟೀಷರು ಬರೆದಂತಹ ಪುಸ್ತಕವನ್ನು ಓದುವಂತಹ ದುರದೃಷ್ಟಕರ ಸ್ಥಿತಿ ನಮ್ಮಲ್ಲಿದೆ. ನಾವು ನಮ್ಮ ಹಿರಿಯರ ಪರಂಪರೆಯನ್ನು ತಿಳಿದುಕೊಳ್ಳುವುದು ಬಹು ಮುಖ್ಯ ಎಂದ ಅವರು ನಾವು ವೈಯಕ್ತಿಯ ನೆಲೆಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು. ಪ್ಲಾಸ್ಟಿಕ್ ಬಿಸಾಡುವುದು. ಪೇಪರ್‌ಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನಮಗೆ ಗೊತ್ತಿಲ್ಲದೇ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.


ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದಿನಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ ಮಗ ಸೊಸೆ ಸಹಿತ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಮೊದಲ ವರ್ಷದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು ಅದು ಇಂದು 6 ಕೋಟಿ ರೂ. ಗಡಿಯನ್ನು ದಾಟಿದೆ. ಇಂದು ಇಲ್ಲಿ ಸಮಾರಂಭ ನಡೆಸಿ ನೆರವು ನೀಡುವ ಉದ್ದೇಶ ಇಷ್ಟೇ. ಇಂತಹ ಕಾರ್ಯಕ್ರಮ ಇಂದು ಸಹಾಯ ಪಡೆದ ಕೈಗಳಿಗೆ ಸ್ಫೂರ್ತಿಯಾಗಬೇಕು. ಮುಂದೊಂದು ದಿನ ಅವರು ಕೂಡಾ ಸಮಾಜದಲ್ಲಿ ಒಂದಷ್ಟು ಮಂದಿಗೆ ನೆರವು ನೀಡಲು ಮುಂದೆ ಬರಬೇಕು. ಕಷ್ಟ ಎಲ್ಲರಿಗೂ ಬರುತ್ತದೆ, ಆದರೆ ಧೃತಿಗೆಡದೆ ಅದನ್ನು ಎದುರಿಸುವ ಛಲ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿ ಗೌರವ ಪಡುವಂತೆ ಸಾಧನೆ ಮಾಡಿ ದೇಶದಲ್ಲಿ ಗುರುತಿಸುವಂತಾಗಬೇಕು ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಪ್ರಕಾಶ್ ಶೆಟ್ಟಿ ಅವರಂತಹ ಪುಣ್ಯಾತ್ಮನ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ. ಹುಟ್ಟುವಾಗ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಕಾರ್ಯ ಸಾಧನೆಯಿಂದ ಹಂತಹಂತವಾಗಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡು ಬಂದಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿ. ಅವರ ದಾನ ಧರ್ಮದ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ ಎಂದು ಹೇಳಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಬೆಂಗಳೂರು ಹುಬ್ಬಳ್ಳಿ ಗುಲ್ಬರ್ಗದಲ್ಲಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅದಮ್ಯ ಫೌಂಡೇಶನ್‌ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಅವರು ಮಾಡುತ್ತ ಬಂದಿದ್ದಾರೆ. ಎಲ್ಲೂ ತಮ್ಮ ಸಹಾಯವನ್ನು ಹೊರಗಡೆ ತೋರಿಸದೆ ಎಲ್ಲರೊಳಗೆ ಒಂದಾಗಿ ಬದುಕುತ್ತಿರುವ ಅವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಅದೇ ರೀತಿ ಪ್ರಕಾಶ್ ಶೆಟ್ಟಿಯವರ ಪ್ರತೀ ಕಾರ್ಯದ ಹಿಂದೆ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಅವರ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಇದೆ. ಅವರ ಪುತ್ರ ಗೌರವ್ ಅವರು ತಂದೆ ತಾಯಿಯ ಪ್ರೀತಿಯ ಪುತ್ರನಾಗಿ ಸರಳ ಸಜ್ಜನಿಕೆಯಿಂದ ಗುರುತಿಸಲ್ಪಡುತ್ತಿದ್ದಾರೆ. ಇಂತಹ ಪುಣ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಪ್ರಕಾಶ್ ಶೆಟ್ಟಿಯವರ ಕುಟುಂಬಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು.

ಬಳಿಕ ವೇದಿಕೆಯಲ್ಲಿ ಶಿಕ್ಷಣ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ವಿಶೇಷ ಚೇತನ ಮಕ್ಕಳು ಹಾಗೂ ಸಾಮಾಜಿಕ ಸಂಘಟನೆಗಳಿಗೆ ಸಾಂಕೇತಿಕವಾಗಿ ‘ನೆರವು’ ಸಹಾಯಹಸ್ತವನ್ನು ವಿತರಿಸಲಾಯಿತು.

ಅನುಷ್ಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಒಟ್ಟು 3000 ಕುಟುಂಬಗಳಿಗೆ, 50 ಸಂಘ-ಸಂಸ್ಥೆಗಳಿಗೆ 6 ಕೋಟಿ ರೂ.ಗೂ ಮಿಕ್ಕಿ ನೆರವು ವಿತರಣೆ:

ಈ ವರ್ಷ ಒಟ್ಟು 3,000 ಕುಟುಂಬಗಳಿಗೆ 6 ಕೋಟಿ ರೂ.ಗೂ ಮಿಕ್ಕಿ ನೆರವನ್ನು ವಿತರಿಸಲಾಗಿದ್ದು ಇದರಿಂದ ಸುಮಾರು ಹದಿನೈದು ಸಾವಿರ ಮಂದಿಗೆ ಪ್ರಯೋಜನವಾಗಲಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಒಂದು ನಿಗದಿತ ಮಾನದಂಡವನ್ನು ಅನುಸರಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ, ಅವಶ್ಯ ಹಿಮ್ಮಾಹಿತಿಗಳನ್ನು ಪಡೆದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಸಮಾಜದಲ್ಲಿ ಪರಿವರ್ತನೆ ತರಬಲ್ಲಂತಹ, ಸಾಮೂಹಿಕ ಹಿತದ ಕಾರ್ಯಕ್ರಮಗಳನ್ನು ಕೈಗೊಂಡ ಸಂಘ ಸಂಸ್ಥೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article