ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯೋಗವಾಗಬೇಕಿದ್ದ ಮೊಬೈಲ್ ಬಳಕೆ ಮಾರಕವಾಗಿ ಪರಿಣಮಿಸಿರುವುದು ಆತಂಕಕಾರಿ ಬೆಳವಣಿಗೆ: ಎಚ್.ಆರ್. ಈಶ್ವರ್ ಕಳವಳ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯೋಗವಾಗಬೇಕಿದ್ದ ಮೊಬೈಲ್ ಬಳಕೆ ಮಾರಕವಾಗಿ ಪರಿಣಮಿಸಿರುವುದು ಆತಂಕಕಾರಿ ಬೆಳವಣಿಗೆ: ಎಚ್.ಆರ್. ಈಶ್ವರ್ ಕಳವಳ


ಮಂಗಳೂರು: ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯ. ಆದರೆ, ಇಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯೋಗವಾಗಬೇಕಿದ್ದ ಮೊಬೈಲ್ ಬಳಕೆ ಮಾರಕವಾಗಿ ಪರಿಣಮಿಸಿರುವುದು ಆತಂಕಕಾರಿ ಬೆಳವಣಿಗೆ” ಎಂದು ಮಂಗಳೂರು ನಗರದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಕಳವಳ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (BSWT) ವತಿಯಿಂದ 2024ನೆ ಸಾಲಿನ ‘ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮತ್ತು ಅರ್ಹ ವಿದ್ಯಾರ್ಥಿಗಳಿಗೆ 10ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


‘ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಳ್ಳಲ್ಲಷ್ಟೇ ಮೊಬೈಲ್ ಬಳಸಬೇಕು. ಆದರೆ, ಮೊಬೈಲ್ ತೆಗೆಸಿಕೊಡಲಿಲ್ಲ ಎಂಬ ಕಾರಣಕ್ಕೆ ಕೆಲವು ಮಕ್ಕಳು ಇಂದು ಪೋಷಕರನ್ನೇ ಕೊಲ್ಲುವ ಹಂತಕ್ಕೆ ತಲುಪಿರುವುದು ಆತಂಕಕಾರಿಯಾದುದು. ವಿದ್ಯಾರ್ಥಿಗಳು ಕಲಿಕೆಗೆ ನೀಡಬೇಕಾದ ಸಮಯವೆಲ್ಲ ಇಂದಿನ ಸೋಷಿಯಲ್ ಮೀಡಿಯಾಗಳಿಂದಾಗಿ ವ್ಯರ್ಥವಾಗುತ್ತಿದೆ. ಹಾಗಾಗಿ, ಡಿಜಿಟಲ್ ಯುಗದಲ್ಲಿ ಪೋಷಕರು, ಶಿಕ್ಷಕರು ಈ ಬಗ್ಗೆ ಎಚ್ಚರ ವಹಿಸಿ, ಜಾಗರೂಕರಾಗಬೇಕು’ ಎಂದು ಕಿವಿಮಾತು ಹೇಳಿದರು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಗಣಪತಿ ಗೌಡ ಅವರು, ಅದೃಷ್ಟಗಳಿಗೆ ಯಾವುದೇ ಭವಿಷ್ಯವಿರುವುದಿಲ್ಲ. ನಾವು ಯಾವುದೇ ವಿಷಯದಲ್ಲಿ ಪ್ರಯತ್ನ ಪಡದೇ ಇದ್ದಲ್ಲಿ ಜಯಶೀಲರಾಗುವುದಕ್ಕೆ ಸಾಧ್ಯವಿಲ್ಲ. ಪ್ರಯತ್ನದ ಮೂಲಕವಾಗಿ ಸಿಗುವ ಫಲಗಳು ಶಾಶ್ವತವಾದುದು. ಹಾಗಾಗಿ, ವಿದ್ಯಾರ್ಥಿಗಳು ಸೋಲನ್ನೊಪ್ಪಿಕೊಳ್ಳದೆ ಪ್ರಯತ್ನ ಪಡುವವರಾಗಬೇಕು. ಆಗ ಮಾತ್ರ ನಮಗೆ ಫಲ ದೊರೆಯಲಿದೆ ಎಂದು ಸಲಹೆ ನೀಡಿದರು.


ಎ.ಜೆ ಆಸ್ಪತ್ರೆಯ ಗೈನೋಕಾಲಜಿಸ್ಟ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ವೀಣಾ ಕೆ.ಆರ್. ಭಾಗ್ವಾನ್ ಮಾತನಾಡಿ, ನಮ್ಮ ಆರೋಗ್ಯ ಕೈಕೊಟ್ಟರೆ ಜೀವನವೇ ಏರುಪೇರಾಗುತ್ತದೆ. ಆರೋಗ್ಯವಂತ ದೇಶ ಕಟ್ಟಬೇಕಾದರೆ ಆರೋಗ್ಯವಂತ ಪ್ರಜೆಗಳು ಬೇಕು. ವೃದ್ದಾಪ್ಯದಲ್ಲೂ ಕೂಡ ನಾವು ಆರೋಗ್ಯವಂತರಾಗಿರಬೇಕು ಎಂದು ಬಯಸುವುದಾದರೆ ಚಿಕ್ಕಂದಿನಿಂದಲೇ ನಮ್ಮ ಆರೋಗ್ಯದ ಬಗ್ಗೆ ಪ್ರತಿದಿನ ಕಾಳಜಿ ವಹಿಸಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಡೈರೆಕ್ಟೊರೇಟ್ ಎಕ್ಸ್ಟೆನ್ಷನ್ ಆಂಡ್ ಔಟ್ ರೀಚ್ ಆಕ್ಟಿವಿಟಿ ಇದರ ಡೈರೆಕ್ಟರ್ ಡಾ. ಅಶ್ವಿನಿ ಎಸ್ ಶೆಟ್ಟಿ, ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಕಾರ ಭಂಡಾರಿ, ಖದೀಜ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಅಶ್ರಫ್ ಎಂ.ಸಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

‘ಚಿಲ್ಡ್ರನ್ಸ್ ವಿಥ್ ಡ್ರೀಮ್ಸ್’ ಇದರ ಸ್ಥಾಪಕಿಯಾಗಿರುವ ರೂಪಾ ಬಲ್ಲಾಳ್ ಉಡುಪಿ ಅವರಿಗೆ ಕಾರ್ಯಕ್ರಮದಲ್ಲಿ ‘ಬಿಎಸ್‌ಡಬ್ಲ್ಯೂಟಿ ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಈ ವೇಳೆ ರೂಪಾ ಅವರ ಕುಟುಂಬ ಸದಸ್ಯರೂ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 175 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು.

ಮಂಗಳ ಗಂಗೋತ್ರಿಯ ನಿವೃತ್ತ ಸೂಪರಿಂಟೆಂಡೆಂಟ್ ಹರೀಶ್ ಕುಮಾರ್ ಕುತ್ತಡ್ಕ ಅವರು ಅಧ್ಯಕ್ಷ್ಯತೆ ವಹಿಸಿ, ಮಾತನಾಡಿದರು. ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನ ಚೇರ್‌ಮೆನ್ ಎನ್. ಅಮೀನ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಸ್ನೇಹಿತರ ಬಳಗವು ಕಟ್ಟಿಕೊಂಡ ಟ್ರಸ್ಟ್‌ ಇದು. ಕಳೆದ 10 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಉದ್ಯೋಗದ ಧ್ಯೇಯವನ್ನಿಟ್ಟು ಕೆಲಸ ಮಾಡುತ್ತಿದೆ. ಇದಕ್ಕಾಗಿ ಹಲವು ಮಂದಿ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಂಗಳೂರಿನ ಕಲಾವಿದೆ ಲಾವಣ್ಯ ಮತ್ತವರ ತಂಡದಿಂದ ಶಿಕ್ಷಣಕ್ಕೆ ಪ್ರೇರಣೆ ನೀಡುವಂತಹ ‘ಮೌಲ್ಯವಿರಲಿ ಶಿಕ್ಷಣಕ್ಕೆ’ ಎಂಬ ಹಾಡನ್ನು ಹಾಡಲಾಯಿತು. 

ಟ್ರಸ್ಟ್‌ನ ಪದಾಧಿಕಾರಿ ಸುಲೈಮಾನ್ ಪಕ್ಕಲಡ್ಕ ವಂದಿಸಿದರು. ಬಬಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನ ಕಾರ್ಯದರ್ಶಿ ಆಕೀಫ್ ಇಂಜಿನಿಯರ್ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article