
ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ಸುಶಾಸನ ದಿನ ಆಚರಣೆ
Thursday, December 26, 2024
ಮಂಗಳೂರು: ದೇಶದ ಮಾಜಿ ಪ್ರಧಾನಿ, ಭಾರತ ರತ್ನ, ಅಜಾತಶತ್ರು ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಪ್ರಯುಕ್ತ ನಗರದ ಕೊಡಿಯಾಲ್ ಬೈಲ್ ನ ಅಟಲ್ ಸೇವಾ ಕೇಂದ್ರದಲ್ಲಿ "ಸುಶಾಸನ ದಿನ" (ಉತ್ತಮ ಆಡಳಿತ ದಿನ) ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು ರಾಷ್ಟ್ರ ಮೊದಲು, ಅಧಿಕಾರ ನಂತರ ಎನ್ನುವ ಸಿದ್ಧಾಂತವನ್ನು ಅಟಲ್ ಜೀ ಪದೇ ಪದೇ ಉಚ್ಚರಿಸಿ ಕೋಟಿ ಕೋಟಿ ಕಾರ್ಯಕರ್ತರ ಪ್ರೇರಣೆಯಾಗಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ರೈತರು, ಬಡವರು, ಮಹಿಳೆಯರು, ಹಾಗೂ ಹಿಂದುಳಿದ ವರ್ಗದವರ ಪರವಾಗಿ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳು ಅಟಲ್ ಜೀ ಅವರ ಕನಸುಗಳು ಸಾಕಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಅವರು ಮಾತನಾಡಿ, ದೂರದೃಷ್ಟಿ ಆಡಳಿತದ ಮೂಲಕ ಇಡೀ ದೇಶದ ಜನಮನ ಗೆದ್ದ ನಾಯಕ ಅಟಲ್ ಜೀ ಅವರ ಕೊಡುಗೆ ಅನನ್ಯವಾಗಿದ್ದು ಇಡೀ ದೇಶ ಅವರಿಗೆ ಎಂದಿಗೂ ಕೃತಜ್ಞನಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ರಮೇಶ್ ಕಂಡೆಟ್ಟು, ಲಲ್ಲೇಶ್, ರಮೇಶ್ ಹೆಗ್ಡೆ, ರವಿಶಂಕರ್ ಮಿಜಾರ್, ಮ.ನ.ಪಾ ಸದಸ್ಯರುಗಳು, ಬಿಜೆಪಿ ಪ್ರಮುಖರು, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.