
ಸಮನ್ವಯದಿಂದ ಕೆಲಸ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಬೇಕು-ನಿರ್ಲಕ್ಷ್ಯ ತೋರಿಸುವುದನ್ನು ಸಹಿಸುವುದಿಲ್ಲ: ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಇಲಾಖೆ ಮತ್ತು ಬ್ಯಾಂಕ್ಗಳು ಸಮನ್ವಯದಿಂದ ಕೆಲಸ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸುವುದನ್ನು ಸಹಿಸುವುದಿಲ್ಲ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ದ.ಕ. ಜಿಲ್ಲಾ ಬ್ಯಾಂಕ್ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಯೋಜನಾ ಅನುಷ್ಠಾನ ಇಲಾಖೆಯ ಅಧಿಕಾರಿಯಲ್ಲಿ ಯೋಜನೆಯ ಪ್ರಗತಿ ಕುರಿತಂತೆ ಪ್ರಶ್ನಿಸಿದಾಗ, ಅಧಿಕಾರಿ ಅಂಕಿ ಅಂಶ ಸಹಿತ ಉತ್ತರಕ್ಕೆ ತಡಕಾಡಿದರು. ಸಂ ಪೂರ್ಣ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದು ಯಾಕೆ ಎಂದು ಸಂಸದರು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿ, ಜಿಲ್ಲೆಯಲ್ಲಿ 8,900 ಅರ್ಜಿಗಳು ಸಲ್ಲಿಕೆಯಾಗಿದ್ದು, 3,950 ಮಂದಿಗೆ ತರಬೇತಿ ಪೂರ್ಣಗೊಂಡಿದೆ ಎಂದಷ್ಟೇ ಉತ್ತರಿಸಿದರು.
ಅಧಿಕಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಪಿ.ಎಂ. ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಸೂಚಿಸಿದರು. ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ತಿಳಿಸುವಂತೆ ಸಂಸದರು ಹೇಳಿದರು.
ಪ್ರಧಾನಮಂತ್ರಿ ಜನ್-ಧನ್ ಯೋಜನೆ ಯೋಜನೆಯಲ್ಲಿ ನಿಗದಿತ ಗುರಿ ಸಾಧನೆ ಇನ್ನೂ ಆಗದಿರುವ ಬಗ್ಗೆ ಸಿಇಒ ಡಾ.ಆನಂದ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿಗಳನ್ನು ಪರಿಶೀಲಿಸಿ ಯಾರೆಲ್ಲ ಖಾತೆ ಮಾಡಿಸಿಲ್ಲ ಎಂದು ತಿಳಿದುಕೊಳ್ಳಬೇಕು. ಈ ಬಗ್ಗೆ ಶಿಬಿರಗಳನ್ನು ಆಯೋಜಿಸುವ ಮೂಲಕವೂ ಖಾತೆಗಳನ್ನು ಮಾಡಿಸಬೇಕು. ಈ ಯೋಜನೆಯಡಿ ಜಿಲ್ಲೆಯಲ್ಲಿ ಸೆ.30ರ ವರೆಗೆ 24,582 ಉಳಿತಾಯ ಖಾತೆಗಳನ್ನು ತೆರೆಯಬೇಕು ತೆರೆಯಲಾಗಿದೆ ಎಂದರು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಆರ್ಥಿಕವಾಗಿ ಅತ್ಯಂತ ಉತ್ತಮ ವಿಮಾ ಯೋಜ ನೆಗಳಾಗಿದೆ. ಅವುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಸದಸ್ಯರಾಗುವಂತೆ ಮಾಡಬೇಕು. ಸಾರ್ವಜನಿಕರಲ್ಲಿಯೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ವರ್ಷ ನವೀಕರಣ ಮಾಡುವ ಕುರಿತಾಗಿಯೂ ಮಾಹಿತಿಗಳನ್ನು ರವಾನಿಸಬೇಕು ಎಂದು ಸಿಇಒ ಸೂಚಿಸಿದರು.
ಶೇ.75ರಷ್ಟು ಗುರಿ ಸಾಧಿಸಿ:
ಆರ್ಬಿಐ ಬೆಂಗಳೂರು ಎಜಿಎಂ ಅರುಣ್ ಕುಮಾರ್ ಮಾತನಾಡಿ, ಪಿಎಂ ಎಸ್ಬಿವೈನಲ್ಲಿ ಜಿಲ್ಲೆ ರಾಜ್ಯದಲ್ಲಿ 13ನೇ ಸ್ಥಾನದಲ್ಲಿದ್ದು, ಪಿಎಂಜೆಜೆಬಿವೈನಲ್ಲಿ 28ನೇ ಸ್ಥಾನದಲ್ಲಿದೆ. ಎಲ್ಲ ಬ್ಯಾಂಕ್ಗಳು ಮಾರ್ಚ್ ಒಳಗೆ ಶೇ.75ರಷ್ಟು ಗುರಿ ಸಾಧಿಸಬೇಕು ಎಂದರು.
ಅಟಲ್ ಪಿಂಚಣಿ ಯೋಜನೆಯಲ್ಲಿಯೂ ಜಿಲ್ಲೆಯಲ್ಲಿ ನೋಂದಣಿ ಕಡಿಮೆ ಇದೆ. ಆದಾಯ ತೆರಿಗೆ ಪಾವತಿದಾರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಒಂದು ಸಲ ನೋಂದಣಿ ಮಾಡಿಸಿಕೊಂಡ ಬಳಿಕ ಕೆಲವು ವರ್ಷಗಳ ಬಳಿಕ ತೆರಿಗೆ ಪಾವತಿ ವ್ಯಾಪ್ತಿಗೆ ಬಂದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಅಟಲ್ ಪಿಂಚಣಿ ಯೋಜನೆಯಲ್ಲಿ ನೋಂದಣಿ ಮಾಡಿಸುವಂತೆ ಅರುಣ್ ಕುಮಾರ್ ಸೂಚಿಸಿದರು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಕೆಲವು ಫಲಾನುಭವಿಗಳು ಸಾಲ ಮಂಜೂರಾದರೂ ಸಾಲ ಪಡೆಯಲು ಬ್ಯಾಂಕ್ಗಳಿಗೆ ಬರುತ್ತಿಲ್ಲ. ಇದರಿಂದ ಯೋಜನೆಯಲ್ಲಿ ನಿದಿ ಷ್ಟ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಇದರಿಂದಾಗಿ 500ಕ್ಕೂ ಹೆಚ್ಚಿನ ಅರ್ಜಿಗಳು ಬಾಕಿ ಇವೆ ಎಂದು ತಿಳಿಸಿದರು. ಫಲಾ ನುಭವಿಗಳಿಗೆ ನೋಟಿಸ್ ಕೊಟ್ಟು ಬ್ಯಾಂಕ್ಗೆ ತೆರಳುವಂತೆ ಸೂಚನೆ ನೀಡಲಾಗುವುದು ಎಂದು ಸ್ವನಿಧಿ ಯೋಜನೆ ಅನುಷ್ಠಾನ ಅಧಿಕಾರಿಗಳು ತಿಳಿಸಿದರು.
ಜ.2ರಂದು ಮಂಗಳೂರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ:
ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಜ.2ರಂದು ಕಾವೂರಿನಲ್ಲಿ ಕಾರ್ಯಾಗಾರ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಮೆಸ್ಕಾಂ ಮತ್ತು ಬ್ಯಾಂಕ್ಗಳು ಜಂಟಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ಕಾರ್ಯಾಗಾರದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಯೋಜನೆಯ ಫಲಾನುಭವಿಗಳಾಗಲು ಪ್ರೇರೇಪಣೆ ನೀಡಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸೂಚಿಸಿದರು.
ಈ ಸಂದರ್ಭ ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ನಬಾರ್ಡ್ ಡಿಜಿಎಂ ಸಂಗೀತಾ ಎಸ್. ಕರ್ತ ಇದ್ದರು.