
ನಗರದ ಆಟೋಗಳ ಸಮಸ್ಯೆಗೆ ತಮಿಳುನಾಡು ಮಾದರಿ ಅನ್ವಯಿಸಲಿ: ಶಾಸಕ ಕಾಮತ್
Tuesday, December 17, 2024
ಮಂಗಳೂರು: ಮಂಗಳೂರು ನಗರದಲ್ಲಿ ಪರ್ಮಿಟ್ ಆಟೋ ರಿಕ್ಷಾ ಹಾಗೂ ಬ್ಯಾಟರಿ ಚಾಲಿತ ರಿಕ್ಷಾಗಳ ನಡುವಿನ ಗೊಂದಲಕ್ಕೆ ತಮಿಳುನಾಡು ಮಾದರಿ ಸೂತ್ರವನ್ನು ಅನುಸರಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಬೆಳಗಾವಿಯ ಅಧಿವೇಶನದಲ್ಲಿ ಸದನದ ಗಮನ ಸೆಳೆದರು.
ನಗರ ಭಾಗದಲ್ಲಿ ಆಟೋಗಳ ನಡುವಿನ ಗೊಂದಲವು ವಿಪರೀತ ಹಂತಕ್ಕೆ ಹೋಗಿದ್ದು ಹಲವು ಪ್ರತಿಭಟನೆಗಳಿಂದ ಪೊಲೀಸ್ ಇಲಾಖೆ, ಆರ್.ಟಿ.ಓ, ಜಿಲ್ಲಾಡಳಿತ ಹಾಗೂ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಸೂತ್ರವಾಗಿ ಈ ಹಿಂದೆ ಸ್ವತಃ ರಿಕ್ಷಾ ಚಾಲಕ-ಮಾಲಕ ಎಸೋಸಿಯೇಷನ್ ಗಳೇ "ತಮಿಳುನಾಡು ಮಾದರಿ"ಗೆ ಬೇಡಿಕೆಯಿಟ್ಟಿದ್ದವು. ಅವರ ಬೇಡಿಕೆಯನುಸಾರ ರಾಜ್ಯ ಸರ್ಕಾರ ಮುಂದಡಿಯಿಟ್ಟರೆ ನಗರ ಭಾಗದಲ್ಲಿ ದಿನನಿತ್ಯ ದುಡಿದು ತಮ್ಮ ಕುಟುಂಬಗಳನ್ನು ಸಲಹುತ್ತಿರುವ ಪ್ರತಿಯೊಬ್ಬ ಶ್ರಮ ಜೀವಿ ರಿಕ್ಷಾ ಚಾಲಕರಿಗೂ ನ್ಯಾಯ ಸಿಗುವ ಭರವಸೆ ಇದೆ.
ಈ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಮಿಳುನಾಡು ಮಾದರಿಯ ವರದಿಯನ್ನು ತರಿಸಿಕೊಂಡು ಕೂಡಲೇ ರಾಜ್ಯಕ್ಕೂ ಅನ್ವಯಿಸುವಂತೆ ಶಾಸಕರು ವಿಶೇಷ ಮನವಿ ಮಾಡಿದರು.