ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Thursday, December 12, 2024
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಉತ್ತರ ಕರ್ನಾಟಕ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲ್ಲೂಕು ಉಗಳಾಟ ನಿವಾಸಿ ಬಪ್ಪನಾಡು ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಐಶ್ವರ್ಯ (19) ಎಂದು ಗುರುತಿಸಲಾಗಿದೆ.
ಮೃತ ಐಶ್ವರ್ಯ ಹಳೆಯಂಗಡಿ ಪದವಿ ಕಾಲೇಜಲ್ಲಿ ದ್ವಿತೀಯ ವರ್ಷದ ಬಿಎ ಓದುತ್ತಿದ್ದು ಗುರುವಾರ ಪರೀಕ್ಷೆಯ ದಿನವಾದ್ದರಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಮನೆಯ ಹೊರಗೆ ಓದಲು ಬಂದಿದ್ದು ಬಳಿಕ ಏಕಾಏಕಿ ಮನೆಯ ಎದುರಿನ ಬಾಗಿಲಿನ ಚಿಲಕ ಲಾಕ್ ಮಾಡಿ ಸ್ಟೇರ್ಕೇಸ್ನ ಕಬ್ಬಿಣದ ರಾಡ್ಗೆ ಚೂಡಿದಾರ್ ಶಾಲುನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿ ಸೋದರತ್ತೆ, ಅವರ ಮಗಳು ಹಾಗೂ ತಮ್ಮನ ಜೊತೆ ವಾಸ್ತವ್ಯವಿದ್ದು ಬೆಳಗ್ಗೆ ಸುಮಾರು ಆರು ಗಂಟೆ ಹೊತ್ತಿಗೆ ಸೋದರತ್ತೆ ಮನೆಯ ಹೊರಗೆ ಬರಲು ಎದುರು ಬದಿಯ ಬಾಗಿಲಿನ ಚಿಲಕ ತೆಗೆಯಲು ಪ್ರಯತ್ನಿಸಿ ವಿಫಲರಾಗಿದ್ದು ಬಳಿಕ ಹೊರಗೆ ಬಂದು ನೋಡುವಾಗ ಆತ್ಮಹತ್ಯೆ ಪ್ರಕರಣ ಬಯಲಿಗೆ ಬಂದಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.