ಡಿ.15 ರಂದು ಪುಸ್ತಕಗಳ ಅನಾವರಣ ಮತ್ತು ಡಾ. ಪದ್ಮರಾಜ ದಂಡಾವತಿ ಅವರಿಗೆ 2024ರ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭ
ಕಾರ್ಕಳ: ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿ ನಮ್ಮಲ್ಲಿ ಅರಿವಿನ ಆತ್ಮ ಶಕ್ತಿಯನ್ನು ಹೆಚ್ಚಿಸುವ ಪುಸ್ತಕದ ಓದು ಸಮಾಜದ ಸರ್ವರೂ ರೂಢಿಸಿಕೊಳ್ಳಲೇಬೇಕಾದ ಉತ್ತಮ ಹವ್ಯಾಸ. ಸಾಮಾಜಿಕ ಮಾಧ್ಯಮದ ಹಾವಳಿಯಲ್ಲಿ ಯುವಜನತೆಯಲ್ಲಿ ಓದು ಕ್ಷೀಣಿಸಿದೆ ಎಂಬ ಅಪವಾದವನ್ನು ತಗ್ಗಿಸಿ ಮನೆ ಮನಗಳಲ್ಲಿ ಪುಸ್ತಕ ಓದಿನ ರುಚಿ ಹತ್ತಿಸಬೇಕು. ಈ ಕಾರ್ಯಕ್ಕಾಗಿ ಪುಸ್ತಕ ಓದುವ, ಬರೆಯುವ ತಲುಪಿಸುವ ವಿಧಾನಕ್ಕೆ ಇನ್ನಷ್ಟು ನಾವಿನ್ಯತೆಯನ್ನು ನೀಡಿ, ಆಧುನಿಕ ತಂತ್ರಜ್ಞಾನದ ಸ್ಪರ್ಶವಿಟ್ಟು ಕನ್ನಡ ಸಾಹಿತ್ಯದ ಔನ್ನತ್ಯಕ್ಕೆ ಶ್ರಮಿಸಬೇಕೆಂಬ ಮಹಾದಾಸೆಯಿಂದ ಪ್ರಾರಂಭವಾದ ‘ಕ್ರಿಯೇಟಿವ್ ಪುಸ್ತಕ ಮನೆ’.
ಪ್ರತಿಭಾವಂತ ಯುವ ಬರಹಗಾರರಿಗೆ ಒಂದೊಳ್ಳೆ ವೇದಿಕೆಯನ್ನು ಒದಗಿಸುವ ಜೊತೆಗೆ ಖ್ಯಾತ ಬರಹಗಾರರ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳನ್ನು ಪ್ರಕಟಿಸುವ ಮೂಲಕ ಅಕ್ಷರ ಅಭಿಮಾನಿಗಳಿಗೆ ಜ್ಞಾನದ ಹೂರಣ ನೀಡಬೇಕೆನ್ನುವ ಕಲ್ಪನೆಯೊಂದಿಗೆ ವಿಧವಿಧವಾದ ಪುಸ್ತಕಗಳನ್ನು ಪ್ರಕಟಿಸುತ್ತಿದೆ. 2024ರ ಜುಲೈ 1 ರಂದು ಏಕಕಾಲದಲ್ಲಿ ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಂಕಿತ ಗಿರೀಶ್ ರಾವ್ ಹತ್ವಾರ್ ಅವರು ಬಿಡುಗಡೆಗೊಳಿಸಿದ್ದರು.
ಡಿಸೆಂಬರ್ 15 ರಂದು ಬೆಂಗಳೂರಿನ ಕ.ಸಾ.ಪ. ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ 6 ಖ್ಯಾತ ಬರಹಗಾರರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಜೋಗಿ, ನಾಡಿನ ಪ್ರಸಿದ್ಧ ಕವಿಗಳಾಗಿರುವ ಬಿ.ಆರ್. ಲಕ್ಷ್ಮಣ್ ರಾವ್ ಇನ್ನು ಹಲವಾರು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿರುವ ಕೃತಿಗಳು ಕೆ. ಸತ್ಯನಾರಾಯಣರವರ ‘ಅಂಪೈರ್ ಮೇಡಂ’, ನರೇಂದ್ರ ಪೈರವರ ’ಕಾವ್ಯ ಸಂಭವ’, ಡಾ. ಲಕ್ಷ್ಮಣ ವಿ.ಎ. ಅವರ ‘ಕವಲುಗುಡ್ಡ’, ಬಾಳಾ ಸಾಹೇಬ್ ಲೋಕಾಪುರರವರ ‘ದೇಹಿ’, ಡಿ.ಎಸ್. ಚೌಗಲೆರವರ ‘ವಾರಸಾ’ ಮತ್ತು ನರೇಂದ್ರ ರೈ ದೇರ್ಲರವರ ‘ಹಸಿರು ಅಧ್ಯಾತ್ಮ’.
ಪುಸ್ತಕ ಪ್ರಕಟಣೆ ಮತ್ತು ಮಾರಾಟದಲ್ಲಿ ಜನಪ್ರಿಯವಾಗಿರುವ ‘ಕ್ರಿಯೇಟಿವ್ ಪುಸ್ತಕ ಮನೆ’ ತನ್ನ ಮೊದಲ ವರ್ಷದ ಪುಸ್ತಕ ಪ್ರಶಸ್ತಿ:
‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ’ಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಪ್ರಸಿದ್ಧ ಬರಹಗಾರರು ಹಾಗೂ ಖ್ಯಾತ ಪತ್ರಕರ್ತರು ಆಗಿರುವ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನೆಪು’ ಕೃತಿಗೆ ‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024ನ್ನು’ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 5,000 ನಗದು, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ. ರಾಜ್ಯದ ಹಲವು ಸಾಹಿತಿಗಳನ್ನೊಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗಾಗಿ ಒಟ್ಟು 78 ಕೃತಿಗಳಲ್ಲಿ 10 ಕೃತಿಗಳನ್ನು ಅಂತಿಮ ಸುತ್ತಿಗೆ ಪರಿಗಣಿಸಿತ್ತು. ಅವುಗಳಲ್ಲಿ ‘ಉಳಿದಾವ ನೆನೆಪು’ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಾಹಿತ್ಯ ಅಭಿಮಾನಿಗಳು, ಪುಸ್ತಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ನಾಡು ನುಡಿಯ ರಸದೌತಣ ಸವಿಯಬೇಕೆಂದು ಈ ಮೂಲಕ ಕ್ರಿಯೇಟಿವ್ ಪುಸ್ತಕ ಮನೆ ಸವಿನಯವಾಗಿ ಆಮಂತ್ರಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.