ಮುಂಜಾಗ್ರತೆಯಿಂದ ಅಪಘಾತ ತಡೆ: ಡಾ.ಅರುಣ್ ಕೆ.
ಉಡುಪಿ: ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ೨೫೦ ಮಂದಿ ಸಾವನ್ನಪ್ಪುತ್ತಿದ್ದಾರೆ. ಸರಾಸರಿ ಒಂದೂವರೆ ದಿನಕ್ಕೆ ಒಬ್ಬರಂತೆ ಅಪಘಾತದಿಂದ ಜೀವ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ವಾಹನ ಚಾಲನೆ ವೇಳೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿದಲ್ಲಿ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಹೇಳಿದರು.
ಗುರುವಾರ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಉಡುಪಿ ಜಿಲ್ಲಾ ಪೋಲಿಸ್, ಉಡುಪಿ ಉಪ ವಿಭಾಗ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಂಡೇ ಕಾರು ಓಡಿಸಬೇಕು ಎಂಬ ಕಾನೂನು ಇದೆ. ಇದು ಕೇವಲ ಕಾನೂನಲ್ಲ, ವಾಹನ ಚಾಲಕರ ಜೀವವನ್ನು ಉಳಿಸಲು ಸಹಕಾರಿ. ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದವರು, ಸೀಟ್ ಬೆಲ್ಟ್ ಹಾಕಿಕೊಂಡವರು ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳಿವೆ. ನಮ್ಮ ಜೀವವನ್ನು ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.
250 ಮಂದಿ ಎಂದರೆ ಸಣ್ಣ ಸಂಖ್ಯೆಯಲ್ಲ. 250 ಕುಟುಂಬ. ಸುಮಾರು 1,000 ಜನರು ಅದರಿಂದ ಸಂಕಷ್ಟಕೀಡಾಗುತ್ತಾದೆ. ಮನೆಯಿಂದ ಹೊರಕ್ಕೆ ಹೋದವರು ಮನೆಗೆ ಮರಳುತ್ತಾರೆ ಎಂಬ ನಂಬಿಕೆಯಲ್ಲಿ ತಾಯಿ, ತಂದೆ, ಮಡದಿ, ಸಹೋದರರು, ಮಕ್ಕಳು ಇರುತ್ತಾರೆ. ಆ ನಂಬಿಕೆಗೆ ಘಾಸಿಯಾಗದಂತೆ ವಾಹನ ಚಲಾಯಿಸಿ, ನಿಮ್ಮ ಜೀವವನ್ನು ಕಾಪಾಡಿಕೊಳ್ಳುವ ಜೊತೆಗೆ ಇತರರ ಜೀವಕ್ಕೂ ಹಾನಿ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ಜಗತ್ತಿನಲ್ಲಿ ಸೈಬರ್ ಕ್ರೈಮ್, ಆನ್ಲೈನ್ ಸ್ಕ್ಯಾಮ್ಗಳು ಪೋಲಿಸ್ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ. ಸೈಬರ್ ಕ್ರೈಮ್ಗಳನ್ನು ಕೃತ್ಯ ನಡೆಯುವ ಮೊದಲೇ ತಡೆಗಟ್ಟಲು ಸಾಧ್ಯವಿದೆ. ಸೈಬರ್ ವಂಚನೆ ಬೆಳಕಿಗೆ ಬಂದ ತಕ್ಷಣ 193ಗೆ ಕಾಲ್ ಮಾಡಿ ಮಾಹಿತಿ ನೀಡಿದರೆ ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಫ್ರೀಝ್ ಮಾಡಲು ಸಾಧ್ಯವಿದೆ. ಜೊತೆಗೆ ಆಧಾರ್ ಕಾರ್ಡ್ಗಳಿಗೆ ಬಯೋಮೆಟ್ರಿಕ್ ಲಾಕ್ ಬಳಸಿ ಎಂದು ಸಲಹೆ ನೀಡಿದರು.
ಮನೆ ಕಳ್ಳತನ, ಸರ ಕಳ್ಳತನಗಳು ನಡೆಯುತ್ತಿರುತ್ತದೆ. ಅದಕ್ಕೆ ಈಗಾಗಲೇ ಸಾರ್ವಜನಿಕರಿಗೆ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ, ಪ್ರವಾಸಕ್ಕೆ ತೆರಳುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಬೇಡಿ ಎಂದು ತಿಳಿಸಲಾಗಿದೆ. ತುರ್ತು ಸೇವೆಗಾಗಿ 112ಕ್ಕೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಉಪಸ್ಥಿತರಿದ್ದರು. ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ಖಾಸಗಿ ವಾಹಿನಿಯ ಮಾಲೀಕ ವಾಲ್ಟರ್ ನಂದಳಿಕೆ, ಮದುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್, ಮಾಡೆಲಿಂಗ್ ಸ್ಪೂರ್ತಿ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಬ್ರಹ್ಮಾವರ ಸಿಪಿಐ ದಿವಾಕರ್ ಸ್ವಾಗತಿಸಿದರು. ಅನಿತಾ ಚೇತನ್ ನಿರೂಪಿಸಿದರು. ಇದೇ ವೇಳೆ ಸಾರ್ವಜನಿಕರಲ್ಲಿ ಅಪರಾಧ ಕೃತ್ಯ ಮತ್ತು ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲು ಮುಂಭಾಗದಲ್ಲಿ ಜಾಥಾಕ್ಕೆ ಜಿಲ್ಲಾ ಎಸ್ಪಿ ಡಾ.ಅರುಣ್ ಚಾಲನೆ ನೀಡಿದರು. ಜಾಥಾ ಶಿರೀಬೀಡು ಮಾರ್ಗವಾಗಿ ಬನ್ನಂಜೆಯ ಸಭಾಭವನವನ್ನು ತಲುಪಿತು. ನಗರದ ಕಾಲೇಜು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ಜನರಿಗೆ ಮಾಹಿತಿ ನೀಡಿದರು.