ಧ್ಯಾನದಿಂದ ಮನಸ್ಸು ಸ್ವಚ್ಛ: ಜಿ.ಪಂ. ಸಿಇಓ ಪ್ರತೀಕ್ ಬಾಯಲ್
Sunday, December 22, 2024
ಉಡುಪಿ: ಧ್ಯಾನದಿಂದ ಮನಸ್ಸು ಸ್ವಚ್ಛವಾಗುತ್ತದೆ. ಆ ಮೂಲಕ ನಮ್ಮ ಪ್ರಾವೀಣ್ಯತೆ ಹೆಚ್ಚಿಸಿಕೊಳ್ಳಬಹುದು ಎಂದು ಜಿ.ಪಂ. ಸಿಇಓ ಪ್ರತೀಕ್ ಬಾಯಲ್ ಹೇಳಿದರು.
ವಿಶ್ವ ಧ್ಯಾನ ದಿನಾಚರಣೆ ಪ್ರಯುಕ್ತ ಶನಿವಾರ ಸಂಜೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಣಿಪಾಲ ಶಾಖೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತಿ ಕಡಿಮೆ ಅವಧಿಯ ಧ್ಯಾನದ ಅಭ್ಯಾಸದ ಅನುಭವ ಹಂಚಿಕೊಂಡ ಅವರು, ರಾಜಯೋಗ ಧ್ಯಾನದ ಬಗ್ಗೆ ತಿಳಿಸಿದರು. ಕಚೇರಿಯ ಕಾರ್ಯ ವ್ಯವಹಾರಗಳಲ್ಲಿ ಧ್ಯಾನದಿಂದ ಪಡೆಯಬಹುದಾದ ಲಾಭಗಳನ್ನು ವಿವರಿಸಿದರು.
ಉಡುಪಿ ಐಎಂಎ ಮಾಜಿ ಅಧ್ಯಕ್ಷೆ ಡಾ. ರಾಜಲಕ್ಷಿ ಧ್ಯಾನದ ಮಹತ್ವ ವಿವರಿಸಿ, ಧ್ಯಾನದಿಂದ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ಸೌರಭ ಅವರು ರಾಜಯೋಗದ ಬಗ್ಗೆ ವಿವರಿಸಿ, ಡಿ.23ರಿಂದ 25ರ ರಾಜಯೋಗ ಶಿಬಿರ ನಡೆಯಲಿದೆ ಎಂದರು.