
ಪಾರ್ಟಿಯಲ್ಲಿ ಯುವತಿಗೆ ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಮಂಗಳೂರು: ಯುವತಿಗೆ ಅಮಲು ಬರಿಸುವ ಪಾರ್ಟಿಯಲ್ಲಿ ಮದ್ಯದ ಜತೆ ವೈನ್ ನೀಡಿ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಸಾಬೀತಾಗಿದ್ದು, ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಲೈಟ್ಹೌಸ್ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಶಿಕ್ಷೆಗೊಳಗಾದ ಅಪರಾಧಿ.
ಯುವತಿ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದು, ಆಕೆಗೆ ಬ್ಯಾಂಕ್ನ ಗ್ರಾಹಕರಾದ ನೌಕಾಪಡೆಯಲ್ಲಿ ಉದ್ಯೋಗಿಯಾಗಿದ್ದ ಜಾಯಿಲಿನ್ ಗ್ಲಾನೆಲ್ ಪಿಂಟೋ ಎಂಬವರ ಪರಿಚಯವಾಗಿತ್ತು. ಗ್ಲಾನೆಲ್ ಅವರಿಗೆ ಅಂಡಮಾನ್ಗೆ ವರ್ಗಾವಣೆಯಾದ ಕಾರಣ 2021ರ ಫೆ.5ರಂದು ರಾತ್ರಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿರುವ ಗೆಸ್ಟ್ಹೌಸ್ನಲ್ಲಿ ಸ್ನೇಹಿತರಿಗೆಲ್ಲ ಪಾರ್ಟಿ ಆಯೋಜಿಸಿದ್ದರು.
ಪಾರ್ಟಿಗೆ ಯುವತಿಯನ್ನೂ ಆಹ್ವಾನಿಸಿದ ಕಾರಣ ಜಾಯಿಲಿನ್ ಅವರ ಸ್ನೇಹಿತನ ಕಾರಿನಲ್ಲಿ ಪಾರ್ಟಿಗೆ ತೆರಳಿದ್ದರು. ಸ್ನೇಹಿತರೆಲ್ಲ ಒಟ್ಟಾಗಿ ಪಾರ್ಟಿಯಲ್ಲಿ ತೊಡಗಿದ ಸಂದರ್ಭ ಯುವತಿ ವೈನ್ ಅಮಲು ಪದಾರ್ಥ ಸೇವಿಸಿದ್ದಾರೆ.
ಪಾರ್ಟಿಯಲ್ಲಿ ಜಾಯಿಲಿನ್ ಅವರ ಸ್ನೇಹಿತ ಎಂದು ಪರಿಚಯಿಸಿಕೊಂಡ ಆರೋಪಿ ಬ್ರಯಾನ್ ರಿಚರ್ಡ್ ಅಮನ್ನಾ ಪರಿಚಯಿಸಿಕೊಂಡಿದ್ದ. ಪಾರ್ಟಿ ಮುಗಿದ ಬಳಿಕ ಎಲ್ಲರೂ ಗೆಸ್ಟ್ ಹೌಸ್ನ ರೂಮಿಗೆ ತೆರಳಿದ್ದಾರೆ. ಇದಾದ ಬಳಿಕ ಪಾರ್ಟಿ ಆಯೋಜಿಸಿದ್ದ ಜಾಯಿಲಿನ್ ಮತ್ತು ರೆಬೆಕಾ ಅವರು ಯುವತಿ ಇದ್ದ ರೂಮಿಗೆ ತೆರಳಿ ತುಂಬ ಹೊತ್ತು ಮಾತನಾಡಿ ಮಲಗಿದ್ದರು.
ಫೆ.6 ರಂದು ಮುಂಜಾನೆ ನಸುಕಿನ 2 ಗಂಟೆಗೆ ಯುವತಿ ಎಚ್ಚರವಾಗಿ ನೋಡಿದಾಗ ಜಾಯಿಲಿನ್ ಮತ್ತು ರೆಬೆಕಾ ರೂಮಿನಲ್ಲಿರಲಿಲ್ಲ. ಯುವತಿ ಮಾತ್ರ ಏಕಾಂಗಿಯಾಗಿ ಮಲಗಿದ್ದಳು.
ರೂಮಿನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಬ್ರಿಯಾನ್ ರೂಮಿಗೆ ಬಂದಿದ್ದು, ಬಳಿಕ ಆಕೆಯನ್ನು ಅತ್ಯಾಚಾರವೆಸಗಿದ್ದಾನೆ. ಬೆಳಗ್ಗೆ 5 ಗಂಟೆಗೆ ಎಚ್ಚರಗೊಂಡು ಯುವತಿ ನೋಡಿದಾಗ ಆರೋಪಿ ಅತ್ಯಾಚಾರವೆಸಗಿರುವ ಕೃತ್ಯ ಗೊತ್ತಾಗಿದೆ.
ಆರೋಪಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸಮಗ್ರ ತನಿಖೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಆರೋಪ ಸಾಬೀತುಪಡಿಸಿ ಜ.10ರಂದು ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 376ಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10,000 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 328ಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 21 ಸಾಕ್ಷಿದಾರರು ಸಾಕ್ಷಿ ಹೇಳಿದ್ದು, 37 ದಾಖಲೆಗಳನ್ನು, 6 ಮಾಲುಗಳನ್ನು ಗುರುತಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ. ಶೇಖರ ಶೆಟ್ಟಿ ಮತ್ತು ಅಭಿಯೋಜಕ ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು. ಸಂತ್ರಸ್ತ ಯುವತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಪಡೆಯಲು ಅರ್ಹರೆಂದು ನಿರ್ದೇಶನ ನೀಡಿದ್ದಾರೆ.