
ಜ.18ಮತ್ತು 19 ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
ಮಂಗಳೂರು: ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡ ಹಾಗೂ ಒಎನ್ಜಿಸಿ ಎಂಆರ್ಪಿಎಲ್ ಪ್ರಾಯೋಜಕತ್ವದಲ್ಲಿ ಕರಾವಳಿ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರಿನ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಜನವರಿ 18 ಮತ್ತು 19 ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸುದ್ದಿಗೋಷ್ಠಿಯಲ್ಲಿ ಗಾಳಿಪಟ ಉತ್ಸವದ ಪೋಸ್ಟರನ್ನು ಅನಾವರಣಗೊಳಿಸಿದರು.
ಇದು ಟೀಮ್ ಮಂಗಳೂರು ತಂಡದ 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದೆ. ಇಂಗ್ಲೆಂಡ್, ಜರ್ಮನಿ, ನೆದರ್ ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಇಷ್ಟೊನಿಯ, ಸ್ವೀಡನ್, ಇಂಡೋನೇಷಿಯಾ, ಪೊರ್ಚುಗಲ್ ಮುಂತಾದ ವಿದೇಶಿ ಗಾಳಿಪಟ ತಂಡಗಳು ಮತ್ತು ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮುಂತಾದ ರಾಜ್ಯಗಳಿಂದ ಗಾಳಿಪಟ ತಂಡಗಳು ಆಗಮಿಸುತ್ತಿವೆ. ಈ ಉತ್ಸವದಲ್ಲಿ ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ, ಬಣ್ಣಗಳ ಗಾಳಿಪಟಗಳನ್ನು ಹಾರಿಸಲಿದೆ. ಚೈನೀಸ್ ಡ್ರ್ಯಾಗನ್ ಗಾಳಿಪಟವನ್ನು ಇಂಡೋನೇಷಿಯಾ ತನ್ನ ಸಂಸ್ಕೃತಿಯ ಪ್ರತೀಕವಾಗಿ ಹಾರಿಸಲಿದೆ. ಎರಡರ ಬದಲು ನಾಲ್ಕು ಮಂದಿ ಮ್ಯೂಸಿಕ್ಗೆ ತಕ್ಕಂತೆ ನರ್ತಿಸುವ ಸ್ಟಂಟ್ ಗಾಳಿಪಟವನ್ನು ಗ್ರೀಸ್ನ ಮಂದಿ ಹಾರಿಸಲಿದ್ದಾರೆ. ಕಥಕ್ಕಳಿಯ ನೂರು ಗಾಳಿಪಟವೂ ಗಗನದಲ್ಲಿ ಮಿಂಚಲಿದೆ ಎಂದರು.
ಟೀಮ್ ಮಂಗಳೂರು ತಂಡ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಗ್ಕಾಂಗ್, ದುಬೈ, ಕತಾರ್ ಮುಂತಾದ ದೇಶಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರಗೊಳಿಸಿವೆ ಎಂದರು. ‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಈ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ದೇಶ, ವಿದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶವಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ್ ಗಾಳಿಪಟಗಳು (ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬೃಹತ್ ಗಾಳಿಪಟಗಳು) ಸೀರೀಸ್ ಕೈಟ್ (ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರ ಮನರಂಜನೆಗೆ ಸೂತ್ರವಾಗಿರಲಿದೆ ಎಂದರು.
ಜನವರಿ 18ರಂದು ಸಂಜೆ 5 ಗಂಟೆಗೆ ಈ ಗಾಳಿಪಟ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಗಂಟೆ 3 ರಿಂದ ರಾತ್ರಿ 9 ರ ತನಕ ಗಾಳಿಪಟ ಉತ್ಸವ ನಡೆಯಲಿದೆ ಎಂದರು.
ಟೀಂ ಮಂಗಳೂರು ತಂಡದ ಸರ್ವೇಶ್ ರಾವ್, ಪ್ರಶಾಂತ್ ಉಪಾಧ್ಯಾಯ, ಪ್ರಾಣ್ ಹೆಗಡೆ, ಗಿರಿಧರ ಕಾಮತ್ ಗ್ರೀಸ್ನ ಕೋಸ್ಟಾ ಮತ್ತಿತರರಿದ್ದರು.