
ಸಮುದ್ರ ಅಲೆಗೆ ಸಿಲುಕಿ ನೀರುಪಾಲಗಿದ್ದ ಪ್ರಜೀತ್ ಎಂ. ಕರ್ಕೇರ ಅವರ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಿದ ಶಾಸಕ ಕಾಮತ್
Wednesday, January 8, 2025
ಮಂಗಳೂರು: ಕಳೆದ ವರ್ಷ ತೋಟ ಬೆಂಗ್ರೆಯ ಕಡಲ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾಗ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದ ಪ್ರಜೀತ್ ಎಂ. ಕರ್ಕೇರ ಬಿನ್ ಮಿಥುನ್, ಸ್ಯಾಂಡ್ಸ್ ಫಿಟ್, ಬೆಂಗ್ರೆ ಅವರ ಕುಟುಂಬಕ್ಕೆ ಕರ್ನಾಟಕ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ 8,00,000 ರೂ. (ಎಂಟು ಲಕ್ಷ) ಮೊತ್ತದ ಚೆಕ್ ಶಾಸಕ ವೇದವ್ಯಾಸ್ ಕಾಮತ್ ಅವರು ಹಸ್ತಾಂತರಿಸಿದರು
ಆಕಸ್ಮಿಕವಾಗಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದ ಪ್ರಜೀತ್ ರವರನ್ನು ರಕ್ಷಿಸಲು ಅಲ್ಲೇ ಇದ್ದ ಶಿವಾನಂದ ಮತ್ತು ಅವಿನಾಶ್ ಎಂಬ ಮೀನುಗಾರರು ಜೀವದ ಹಂಗು ತೊರೆದು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ನಂತರದ ದಿನಗಳಲ್ಲಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಶಾಸಕರು ಸರ್ಕಾರದಿಂದ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಲಭಿಸುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ನೊಂದ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡುವ ಕುರಿತು ಮಂಗಳೂರಿನ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕರು ಶ್ರೀ ದಿಲೀಪ್ ಕುಮಾರ್ ರವರು ಸರ್ಕಾರಕ್ಕೆ ಸೂಕ್ತ ದಾಖಲೆಗಳ ಸಹಿತ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಇದೀಗ ಪರಿಹಾರ ಮೊತ್ತ ವಿತರಣೆಯಾಗಿದೆ.