
ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಿ: ಎಸ್ಡಿಟಿಯು
ಮಂಗಳೂರು: ಆನ್ಲೈನ್ ಮೂಲಕ ಬೇಡಿಕೆ ಸಲ್ಲಿಸಿದ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಗಿಗ್ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸುವ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಖಾದರ್ ಫರಂಗಿಪೇಟೆ, ಕುಟುಂಬಗಳನ್ನು ಸಲಹುವ ಉದ್ದೇಶದಿಂದ ಮಂಗಳೂರು ನಗರದಲ್ಲಿ ಹಲವು ಕಂಪನಿಗಳಲ್ಲಿ ನೂರಾರು ಗಿಗ್ ಕಾರ್ಮಿಕರು ದುಡಿಯುತ್ತಿದ್ದು, ಕಂಪನಿಗಳು ಇವರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿವೆ ಎಂದರು.
ಆಹಾರ ವಿತರಿಸುವ ಗಿಗ್ ಕಾರ್ಮಿಕರಿಗೆ 20016 ರಲ್ಲಿ ನಿಗದಿಪಡಿಸಿದ ಕಮಿಷನ್ ದರ 2025 ರಲ್ಲೂ ಇದೆ. ಪರಿಷ್ಕರಣೆಯಾಗಿಲ್ಲ. ದಿನದಲ್ಲಿ 10 ಗಂಟೆ ದುಡಿಮೆ, ಪ್ರೋತ್ಸಾಹಧನ ಪಡೆಯಲು ಆರೋಗ್ಯ, ಸುರಕ್ಷತೆ ಲೆಕ್ಕಿಸದೆ ಜೀವದ ಹಂಗು ತೊರೆದು ದುಡಿಯುವ ಗಿಗ್ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ ಎಂದವರು ಹೇಳಿದರು.
ಎಸ್ಡಿಟಿಯು ಜಿಲ್ಲಾ ಪ್ರ.ಕಾರ್ಯದರ್ಶಿ ರಹಿಮಾನ್ ಬೋಳಿಯಾರ್, ಮಂಗಳೂರು ದಕ್ಷಿಣ ಅಧ್ಯಕ್ಷ ಇಕ್ಬಾಲ್ ಬಿಪಿ, ಆಟೋ ಯೂನಿಯನ್ ದಕ್ಷಿಣ ಇದರ ಇಲ್ಯಾಸ್ ಬೆಂಗ್ರೆ ಮತ್ತು ಗಿಗ್ ಕಾರ್ಮಿಕ ಜಾಹಿದ್ ಉಪಸ್ಥಿತರಿದ್ದರು.