
ನಗರದ ಪ್ರಮುಖ ರಸ್ತೆಯಲ್ಲೇ ಆಹಾರ ಮೇಳ ನಡೆಸಲು ಅವಕಾಶ ಮಾಡಿಕೊಟ್ಟಿರುವ ಪಾಲಿಕೆ ಮತ್ತು ಜಿಲ್ಲಾಡಳಿತದ ನಡೆಗೆ ಡಿವೈಎಫ್ಐ ವಿರೋಧ
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಟಾನವು ಮಣ್ಣಗುಡ್ಡ, ಲಾಲ್ಭಾಗ್, ಲೇಡಿಹಿಲ್ ಮುಖ್ಯ ರಸ್ತೆಯನ್ನು ಮುಚ್ಚಿ ನಡೆಸಲೊರಟಿರುವ ಸ್ಟ್ರೀಟ್ ಫುಡ್ ಫೆಸ್ಟಿವಲ್ನಿಂದಾಗಿ ವಿಪರೀತ ವಾಹನ ದಟ್ಟಣೆಯುಂಟಾಗಿ ಸಂಚಾರಗಳೆಲ್ಲವೂ ಅಸ್ತವ್ಯಸ್ತಗೊಂಡು ಜನಸಾಮಾನ್ಯರು ತೊಂದರೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ನಗರದ ಹೃದಯ ಭಾಗದ ಮುಖ್ಯ ರಸ್ತೆಯಲ್ಲೇ ಆಯೋಜಕರಿಗೆ ಆಹಾರ ಮೇಳ ನಡೆಸಲು ಅವಕಾಶ ಮಾಡಿಕೊಟ್ಟಿರುವ ಪಾಲಿಕೆ ಮತ್ತು ಜಿಲ್ಲಾಡಳಿತದ ನಡೆಗೆ ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ವಿರೋಧವನ್ನು ವ್ಯಕ್ತಪಡಿಸಿದೆ.
ಮಂಗಳೂರು ನಗರದ ಸೌಂದರ್ಯಕ್ಕೆ ಬೀದಿಬದಿ ವ್ಯಾಪಾರಗಳು ಅಡಚಣೆಯಾಗಲಿದೆ ಎಂಬ ನೆಪವೊಡ್ಡಿ ಬೀದಿಯಲ್ಲಿ ತಳ್ಳುಗಾಡಿ ಮೂಲಕ ಆಹಾರ ಮಾರುವವರನ್ನು ಪಾಲಿಕೆ ಆಡಳಿತ ಬಲವಂತದಿಂದ ತೆರವುಗೊಳಿಸಬಹುದು ಪೊಲೀಸ್ ಇಲಾಖೆ ಟ್ರಾಫೀಕ್ ಸಮಸ್ಯೆ ಮುಂದಿಡಬಹುದು ಆದರೆ ಪ್ರಭಾವಿಗಳು ಪ್ರತಿಷ್ಟೆಗಾಗಿ ನಡೆಸುವ ಆಹಾರ ಮೇಳಗಳು ರಾಜ ಬೀದಿಯಲ್ಲೇ ನಡೆಸಲು ಅವಕಾಶ ಸಿಗುವುದೆಂದರೆ ಏನರ್ಥ? ಪ್ರಭಾವಿಗಳ ಸಹ್ನೆಗೆ ಪಾಲಿಕೆಯ ರಸ್ತೆ, ಪುಟ್ಪಾತ್ ಎಲ್ಲೆಂದರಲ್ಲೂ ಆಯೋಜಿಸುವ ಅವಕಾಶ, ಆಹಾರ ಮೇಳಕ್ಕಾಗಿ ಮುಖ್ಯರಸ್ತೆಗಳನ್ನೆಷ್ಟೇ ದಿನ ಮುಚ್ಚಿದರೂ ಪೊಲೀಸ್ ಇಲಾಖೆ ಸಹಕರಿಸುತ್ತದೆಂದರೆ ಇದು ಯಾವ ತರದ ಆಡಳಿತ ನೀತಿ ಎಂದು ನಗರ ಪಾಲಿಕೆಯ ಬಿಜೆಪಿ ಆಡಳಿತ ಮತ್ತು ರಾಜ್ಯದ ಕಾಂಗ್ರೆಸ್ ಸರಕಾರ ಉತ್ತರಿಸಬೇಕು.
ಈಗಾಗಲೇ ಜಿಲ್ಲಾಡಳಿತ ಆಯೋಜಿಸುವ ಕರಾವಳಿ ಉತ್ಸವದಿಂದಾಗಿ ಮಂಗಳ ಸ್ಟೇಡಿಯಂ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲೂ ವಾಹನ ದಟ್ಟನೆ ವಿಪರೀತವಾಗಿ ಏರಿಕೆಯಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ. ಇನ್ನು ಈ ಕಡೆ ಕ್ರದಿ ಪಾರ್ಕ್ನಲ್ಲೂ, ಆ ಕಡೆ ತಣ್ಣೀರುಬಾವಿಯಲ್ಲಿ ಗಾಳಿಪಟ ಉತ್ಸವದಿಂದ ನಗರದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಗೊಳ್ಳುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಈ ಹಿಂದೆಯೂ ಆಹಾರ ಮೇಳದಿಂದಾಗಿ ಉಂಟಾದ ಅಡಚಣೆ, ಟ್ರಾಫೀಕ್ ಸಮಸ್ಯೆಗಳೆಲ್ಲವೂ ಜಿಲ್ಲಾಡಳಿತದ ಗಮನದಲ್ಲಿದ್ದರೂ ಮತ್ತದೇ ತಪ್ಪನ್ನು ಮುಂದುವರಿಸುತ್ತಿದೆ ಎಂದರೆ ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂದು ಜಿಲ್ಲಾಡಳಿತ ಉತ್ತರಿಸಬೇಕು.
ಒಟ್ಟು ಮಂಗಳೂರು ನಗರವನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಸರಕಾರಿ ಕಾರ್ಯಕ್ರಮದ ನಡುವೆ ವೈಜ್ಞಾನಿಕ ದೃಷ್ಟಿಕೋನ ಇಲ್ಲದೆ ಎಲ್ಲೆಂದರಲ್ಲಿ ಪ್ರಭಾವಿಗಳ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ, ಹಾಡುಹಗಲೇ ಬ್ಯಾಂಕ್ ದರೋಡೆ, ಎಲ್ಲೆಂದರಲ್ಲಿ ಕಳ್ಳರ ಹಾವಳಿ, ರಾತ್ರೀಇಡೀ ಅಕ್ರಮ ಮರಳುಗಾರಿಕೆ ಇದನ್ನೆಲ್ಲಾ ನಿಯಂತ್ರಿಸಲಾಗದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಂಗಳೂರು ನಗರವನ್ನು ಯಾವ ಧಿಕ್ಕಿನೆಡೆಗೆ ಕೊಂಡೊಯ್ಯಲಿದೆ ಎಂಬ ಆತಂಕ ನಗರದ ಜನಸಾಮಾನ್ಯರಲ್ಲಿ ಮನೆ ಮಾಡಿದೆ.
ಮುಖ್ಯ ರಸ್ತೆಯನ್ನೇ ಮುಚ್ಚಿ ನಗರದ ಸಂಚಾರಕ್ಕೆ ಅಡಚಣೆಯುಂಟು ಮಾಡಲಿರುವ ಆಹಾರ ಮೇಳಕ್ಕೆ ಅವಕಾಶ ಮಾಡಿಕೊಟ್ಟಿರುವ ಪಾಲಿಕೆಯ ಬಿಜೆಪಿ ಆಡಳಿತ ಮತ್ತು ಜಿಲ್ಲಾಡಳಿತದ ನಡೆಯನ್ನು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ವಿರೋಧಿಸುತ್ತದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಟಾನದ ಆಹಾರ ಮೇಳವನ್ನು ವಾಹನ ಸಂಚಾರ ಸೇರಿದಂತೆ ಇನ್ನಿತರ ಯಾವುದೇ ಅಡಚಣೆಯಾಗದಂತಹ ಪರ್ಯಾಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.