ಮೂಡುಬಿದಿರೆಯಲ್ಲಿ 334 ಮಂದಿಗೆ ಹಕ್ಕು ಪತ್ರ ವಿತರಣೆ

ಮೂಡುಬಿದಿರೆಯಲ್ಲಿ 334 ಮಂದಿಗೆ ಹಕ್ಕು ಪತ್ರ ವಿತರಣೆ

ಬಡವರ ರಕ್ಷಣೆ ಸರ್ಕಾರದ ಜವಾಬ್ದಾರಿ: ಸಚಿವ ದಿನೇಶ್ ಗುಂಡೂರಾವ್


ಮೂಡುಬಿದಿರೆ: ಬಡವರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ದೇವರಾಜ ಅರಸು ಸರ್ಕಾರವು ಭೂಮಿಯಿಲ್ಲದ ಜನರಿಗೆ ಜಮೀನ್ದಾರರ ಭೂಮಿಯನ್ನು ಕಾನೂನಾತ್ಮಕವಾಗಿ ಹಂಚಿದ್ದರಿಂದ ಕ್ರಾಂತಿಕಾರಿ ಬದಲಾವಣೆಯಾಗಿದೆ. ಗುಂಡೂರಾವ್ ಆಡಳಿತಾವಧಿಯಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಯಿತು. ಇದೀಗ ಸಿದ್ಧರಾಮಯ್ಯ ಸರ್ಕಾರವು ಬಡವರಿಗೆ ಭೂಮಿ ನೀಡುವುದನ್ನು ಆದ್ಯತೆಯಾಗಿ ಪರಿಗಣಿಸಿದ್ದು ಇದರಿಂದ ಬಡವರ ಬದುಕು ಹಸನಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 


ಅವರು ಕಂದಾಯ ಇಲಾಖೆ ವತಿಯಿಂದ ಸಮಾಜ ಮಂದಿರದಲ್ಲಿ ಶುಕ್ರವಾರ ಮೂಡುಬಿದಿರೆ ತಾಲೂಕಿನ ಅರ್ಹ 334 ಮಂದಿ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿಯಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ, ಶಿಕ್ಷಣ ಸರ್ಕಾರದ ಆದ್ಯತೆಯಾಗಿದೆ. ಇದರಿಂದ ಬಡತನ ನಿರ್ಮಾಲನೆಯಾಗಲಿದೆ. ಬಡವರಿಗೆ ಅನುಕೂಲವಾಗುವಂತೆ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದಕ್ಕಾಗಿ 50 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತದೆ. ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ದ.ಕ. ಜಿಲ್ಲೆಯಲ್ಲಿ  ಮೂವತ್ತು ಸಾವಿರ ಮನೆಗಳಿಗೆ ಹಣ ಜಮೆಯಾಗುತ್ತಿದೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದರು.


ಹಕ್ಕುಪತ್ರ ಸಿಗದ ಫಲಾನುಭವಿಗಳಿಗೆ ಹಕ್ಕುಪತ್ರ ಸಿಕ್ಕಿದೆ. ರಾಜಕೀಯ ಬಿಟ್ಟು ಯಾವುದೇ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿ ಬಡ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡಿದರೆ ಬಡವರಿಗೆ ನಿಜವಾಗಿಯೂ ನ್ಯಾಯ ಸಿಕ್ಕಂತಾಗುತ್ತದೆ. ಹಕ್ಕುಪತ್ರ ಸಿಗದೆ ಇನ್ನೂ ಬಾಕಿ ಉಳಿದಿರುವ ಬಡ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಸಿಗಬೇಕಾಗಿದೆ ಈ ನಿಟ್ಟಿನಲ್ಲಿ ಮುಂದಿನ ಸೋಮವಾರದಿಂದಲೇ ಅಂತವರ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರ ಒದಗಿಸುವ ಕೆಲಸವನ್ನು ಜನಪ್ರತಿನಿಧಿಗಳು, ಜನಪ್ರತಿನಿಧಿಗಳಾಗಲು ಬಯಸುವವರು ಮಾಡಬೇಕಿದೆ ಎಂದು ಸಲಹೆ ನೀಡಿದರು.


ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಸರಕಾರದ ಅವಧಿಯಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮಂದಿಗೆ ಹಕ್ಕುಪತ್ರ ನೀಡಲಾಗಿತ್ತು. ಈಗ ಉಳಿದವರಿಗೆ ಹಕ್ಕು ಪತ್ರ ನೀಡಲಾಗಿದೆ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಖುದ್ದು ಫಲಾನುಭವಿಗಳನ್ನು ಭೇಟಿಯಾಗಿ ತಾರತಮ್ಯವಿಲ್ಲದೆ ಹಕ್ಕು ಪತ್ರ ವಿತರಿಸಲಾಗಿದೆ ಎಂದರು. 

ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ ಉಪಸ್ಥಿತರಿದ್ದರು. ತಹಸೀಲ್ದಾರ್ ಪ್ರದೀಪ್ ಹುರ್ಡೇಕೆರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು.

ಮುನಿಸಿಕೊಂಡಿದ್ದ ಶಾಸಕ ಕೋಟ್ಯಾನ್ ಕಾಯ೯ಕ್ರಮದಲ್ಲಿ ಭಾಗಿ: 

ತಾನು ಶ್ರಮ ಪಟ್ಟು ತಯಾರಿಸಿದ, ಶಾಸಕರ ಹಕ್ಕು ಆಗಿರುವ ಹಕ್ಕು ಪತ್ರ ವಿತರಣೆ ಮಾಡಲು ದಿನಾಂಕ ನಿಗದಿಪಡಿಸಿದ್ದೆ ಆದರೆ ಕಾಂಗ್ರೆಸ್ ವ್ಯಕ್ತಿಗಳು ತಡೆಯೊಡ್ಡುವ ಮೂಲಕ ಅಭಿವೃದ್ಧಿ ಕೆಲಸಗಳಲ್ಲಿ ರಾಜಕಾರಣ ಮಾಡುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪತ್ರಿಕಾಗೋಷ್ಠಿಯಲ್ಲಿ ನೋವು ತೋಡಿಕೊಂಡು ಮುನಿಸಿಕೊಂಡಿದ್ದ ಶಾಸಕ ಕೋಟ್ಯಾನ್ ತಾನು ಭಾಗವಹಿಸಬೇಕಾಗಿದ್ದ ಇನ್ನೊಂದು ಕಾರ್ಯಕ್ರಮವನ್ನು ರದ್ದುಗೊಳಿಸಿ ಸಚಿವರ ಹಕ್ಕುಪತ್ರ ವಿತರಣಾ ಕಾಯ೯ಕ್ರಮದಲ್ಲಿ ಶಿಷ್ಠಾಚಾರದಂತೆ ಭಾಗವಹಿಸುವ ಮೂಲಕ ಮಾದರಿಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article