ದ್ವೇಷದಿಂದ ವ್ಯಕ್ತಿಯ ಕೊಲೆ: ಅಪರಾಧಿಗೆ ಸಜೆ

ದ್ವೇಷದಿಂದ ವ್ಯಕ್ತಿಯ ಕೊಲೆ: ಅಪರಾಧಿಗೆ ಸಜೆ

ಮಂಗಳೂರು: ಬಂಟ್ವಾಳದ ತೆಂಕಕಜೆಕಾರಿನ ಕೆಳಗಿನ ಕಾರ್ಲ ಎಂಬಲ್ಲಿ ವೈಯಕ್ತಿಕ ದ್ವೇಷದಿಂದ ವ್ಯಕ್ತಿಯ ಕೊಲೆ ಮಾಡಿದ ಆರೋಪಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ಮತ್ತು 1.30 ಲಕ್ಷ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಆರೋಪಿ ತೆಂಕಕಜೆಕಾರು ನಿವಾಸಿ ಸಿದ್ಧಿಕ್(34) ಶಿಕ್ಷೆಗೆ ಒಳಗಾದಾತ. ಮಹಮ್ಮದ್ ರಫೀಕ್(20) ಕೊಲೆಗೀಡಾದ ವ್ಯಕ್ತಿ.

2021ರ ಸೆಪ್ಟೆಂಬರ್ 12ರಂದು ಸಂಜೆ ಆರೋಪಿಯು ರಫೀಕ್‌ನನ್ನು ಸಿಗರೇಟ್ ಸೇದುವ ನೆಪದಲ್ಲಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ತನ್ನ ಮನೆಗೆ ಹೋಗಿ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿದ್ದಲ್ಲದೆ, ಮೃತ ರಫೀಕ್‌ನ ಮನೆಗೆ ತೆರಳಿ ಆತನ ತಾಯಿಯಲ್ಲಿ ಕೇಳಿ ಆರೋಪಿ ಊಟ ಕೂಡ ಮಾಡಿದ್ದನು. ಆಗ ಪುತ್ರನ ಬಗ್ಗೆ ತಾಯಿ ಬಿಫಾತುಮ್ಮ ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದನು. ಬಳಿಕ ಸ್ನೇಹಿತ ಫಯಾಜುದ್ದೀನ್‌ನಲ್ಲಿ ಸುಳ್ಳು ಹೇಳಿ ಆತನ ಕಾರನ್ನು ಪಡೆದು ಕಾರಿನಲ್ಲಿ ರಫೀಕ್‌ನ ಮೃತದೇಹವನ್ನು ದೇವಸ್ಯ ಮೂಡೂರಿನ ನೀರೊಲ್ಬೆಯ ಮೋರಿಯ ಕೆಳಗೆ ಬಿಸಾಡಿ ಮನೆಗೆ ಬಂದಿದ್ದನು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಪುಂಜಾಲಕಟ್ಟೆ ಠಾಣಾ ಇನ್ಸ್‌ಪೆಕ್ಟರ್ ಶಿವಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಭಿಯೋಜನೆ ಪರ ಒಟ್ಟು 19 ಸಾಕ್ಷಿಗಳನ್ನು ವಿಚಾರಿಸಲಾಗಿದೆ. 57 ದಾಖಲೆ, 14 ವಸ್ತುಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ವಾದ-ವಿವಾದ ಆಲಿಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಆರೋಪಿ ಸಾಬೀತಾಗಿದೆ ಎಂದು ತೀರ್ಮಾನಿಸಿದರು.

ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 302ರ ಪ್ರಕಾರ ಜೀವಾವಧಿ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 201ರಂತೆ 7 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಮೃತನ ತಾಯಿಗೆ ಪರಿಹಾರ ನೀಡುವಂತೆಯೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಸರ್ಕಾರದ ಪರವಾಗಿ ಕೆಲವು ಸಾಕ್ಷಿಗಳ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪಿ.ನಾಯ್ಕ ಮತ್ತು ಬಿ.ಶೇಖರ ಶೆಟ್ಟಿ, ಉಳಿದ ಸಾಕ್ಷಿಗಳನ್ನು ಸರ್ಕಾರಿ ಅಙಭಿಯೋಜಕ ಚೌಧರಿ ಮೋತಿಲಾಲ್ ವಿಚಾರಿಸಿ ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article