
ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕಿಯರಿಗೆ ಸನ್ಮಾನ
ಮಂಗಳೂರು: ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಶ್ರೇಷ್ಠ ಸಾಧನೆ ತೋರಿದ ಕ್ರೀಡಾ ಸಾಧಕಿಯರನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮವು ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆಯಿತು.
ಸನ್ಮಾನದ ನಂತರ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, "ಈ ಬಾಲಕಿಯರ ಸಾಧನೆ ನಮ್ಮ ಕ್ಷೇತ್ರಕ್ಕೆ ಮಾತ್ರವಲ್ಲದೇ ಇಡೀ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯಾಗಿದ್ದು ಅವರೆಲ್ಲರಿಗೂ ಅಭಿನಂದನೆಗಳು. ಜೊತೆಗೆ ಅವರ ಸಾಧನೆಗೆ ಕಾರಣರಾಗಿರುವ ಶಿಕ್ಷಕರು, ಪೋಷಕರು, ಹಿತೈಷಿಗಳಿಗೂ ವಿಶೇಷ ಅಭಿನಂದನೆಗಳು. ಮಹಿಳಾ ಮೋರ್ಚಾ ವತಿಯಿಂದ ನಡೆಯುತ್ತಿರುವ ಇಂತಹ ಸನ್ಮಾನ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಯುವ ಜನಾಂಗಕ್ಕೆ ಇನ್ನಷ್ಟು ಪ್ರೇರಣೆ ನೀಡಲಿದ್ದು ಎಲ್ಲರ ಕ್ರೀಡಾ ಭವಿಷ್ಯವು ಉಜ್ವಲವಾಗಿರಲಿ, ಆ ಮೂಲಕ ದೇಶಕ್ಕೆ ಕೀರ್ತಿ ತನ್ನಿ" ಎಂದು ಹಾರೈಸಿದರು.
ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ 34ನೇ ಜ್ಯೂನಿಯರ್ ತ್ರೋಬಾಲ್ ಚಾಂಪಿಯನ್ಶಿಪ್ ಕ್ರೀಡಾ ಕೂಟದಲ್ಲಿ ಅಮೋಘ ಪ್ರದರ್ಶನದ ಮೂಲಕ ಪ್ರಥಮ ಸ್ಥಾನಗಳಿಸಿದ ಕರ್ನಾಟಕ ತಂಡದ ಸದಸ್ಯೆಯರಾಗಿದ್ದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಧನ್ಯಾ.ಬಿ, ದಕ್ಷ ಬೆಂಗ್ರೆ, ಹಂಶಿನಿ, ಹಾಗೂ ಛತ್ತಿಸ್ ಗಡ್ ನಲ್ಲಿ ನಡೆದ ರಾಷ್ಟ್ರೀಯ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿ ತೀವ್ರ ಪೈಪೋಟಿ ನೀಡಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡ ಕರ್ನಾಟಕ ತಂಡದ ವಿದ್ಯಾರ್ಥಿಗಳಾದ ಸೇಕ್ರೆಡ್ ಹಾರ್ಟ್ಸ್ ಶಾಲೆಯ ಆರಾಧ್ಯ, ಶೆರ್ಲಿನ್ ಲೋರಿನ್ ಡಿಸೋಜಾ, ವೈಷ್ಣವಿ ಶೆಟ್ಟಿ ಅವರು ಅಭಿನಂದನೆಗಳ ಸಹಿತ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಹಾಗೂ ಮ.ನ.ಪಾ ಸದಸ್ಯೆ ಪೂರ್ಣಿಮಾ ಎಂ, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಪ್ರಧಾನ ಕಾರ್ಯದರ್ಶಿ ಶಬರಿ ಶೆಟ್ಟಿ ಹಾಗೂ ಕಮಲಾಕ್ಷಿ, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತು ಸದಸ್ಯರು, ಮನಪಾ ಸದಸ್ಯರುಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.