
ಸುಸ್ಥಿರ ಅಭಿವೃದ್ಧಿ: ಅಂತಾರಾಷ್ಟ್ರೀಯ ಸಮ್ಮೇಳನ
ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಹ್ಯುಮಾನಿಟೀಸ್ ವತಿಯಿಂದ ಜ.15 ರಿಂದ 17ರ ವರೆಗೆ ‘ಸುಸ್ಥಿರ ಅಭಿವೃದ್ಧಿ ಗುರಿಗಳು: ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಕ್ರಿಯೆಗಳ ಸಂಗಮ’ ಎಂಬ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಸಮ್ಮೇಳನ ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಪ್ರಾಯೋಜಕತ್ವದಲ್ಲಿ ಸಂತ ಅಲೋಶಿಯಸ್ ವಿವಿಯ ಶೈಕ್ಷಣಿಕ ಪಾಲುದಾರರಾದ ಅಮೆರಿಕದ ಜಪಾನಿನ ಸೋಫಿಯಾ ಯುನಿವರ್ಸಿಟಿ, ಕಾರ್ಚ್ಲ್ಯಾಂಡ್ ಮತ್ತು ಸ್ಪೇನ್ನ ಕ್ಯಾಥೋಲಿಕಾ ವಿಶ್ವವಿದ್ಯಾನಿಲಯದ ಸಹಕಾರವನ್ನು ಹೊಂದಿದೆ ಎಂದು ವಿವಿಯ ಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಥಿಂಕ್ ಲೀಪ್ ಟೆಕ್ನಾಲಜಿ ಲ್ಯಾಬ್ಸ್ ಪ್ರೈ. ಲಿ.ನ. ಸ್ಥಾಪಕ ಮತ್ತು ಸಿಇಒ ವಿಘ್ನೇಶ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಪಾನಿನ ಸಿಸೆನ್ ವಿವಿಯ ಪ್ರೊ. ಕೇಟಿ ಮಾಟ್ಸುಯಿ ಮುಖ್ಯ ಭಾಷಣ ಮಾಡಲಿದ್ದಾರೆ. 1ನೇ ತಾಂತ್ರಿಕ ಅಧಿವೇಶನವನ್ನು ಪರಿಸರ ತಜ್ಞೆ ಮತ್ತು ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮದ ನಾಯಕಿ ಡಾ. ಶೋಭಾ ರೆಡ್ಡಿ ನಡೆಸಲಿದ್ದಾರೆ. 2 ಮತ್ತು 3ನೇ ಅಧಿವೇಶನದಲ್ಲಿ ಸಾಮಾಜಿಕ ಮಾನವಶಾಸ್ತ್ರಜ್ಞ ಪ್ರೊ. ಎ.ಆರ್. ವಾಸವಿ, ಸೆಂಟರ್ ಫಾರ್ ಗ್ಲೋಬಲ್ ಎಂಗೇಜ್ಮೆಂಟ್ ಸನಿ ಕಾರ್ಚ್ಲ್ಯಾಂಡ್ನ ಪ್ರೊ. ಅಲೆಕ್ಸಾಂಡ್ರು ಬಾಲಾಸ್ ನೆರವೇರಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ಯಾನಲಿಸ್ಟ್ಗಳಿಂದ ಚರ್ಚೆಯನ್ನು ಆಯೋಜಿಸಲಾಗಿದೆ. ಸಮ್ಮೇಳನದ ಅಂಗವಾಗಿ ಈಗಾಗಲೇ 110 ಸಂಶೋಧನಾ ಪ್ರಬಂಧಗಳು ಸ್ವೀಕೃತವಾಗಿವೆ ಎಂದು ಅವರು ವಿವರಿಸಿದರು.
ಪೂರ್ವ ಸಮ್ಮೇಳನದ ಭಾಗವಾಗಿ ಮನೋವಿಜ್ಞಾನ, ರಾಜ್ಯಶಾಸ್ತ್ರ, ಸಮಾಜ ಕಾರ್ಯ ಮತ್ತು ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ಜ. 13ರಂದು ಬ್ರೇಕಿಂಗ್ ಪ್ಯಾಟನ್ಸ್ ಮತ್ತು ಕ್ರಿಯೇಟಿಂಗ್ ಚೇಂಜ್, ಸಂಘರ್ಷ, ಸಮನ್ವಯ ಮತ್ತು ಶಾಂತಿ ನಿರ್ಮಾಣ, ಆತ್ಮಹತ್ಯೆ ತಡೆಗಟ್ಟುವಿಕೆ ಗೇಟ್ಕೀಪರ್ ತರಬೇತಿ ಮತ್ತು ಸ್ಥಳೀಯತೆಯನ್ನು ಸಂಕ್ಷಿಸುವಲ್ಲಿ ಮಾಧ್ಯಮ ಪಾತ್ರ ವಿಷಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ. ಸಾಜಿಮೊನ್, ಸಂಚಾಲಕರಾದ ಡಾ. ಲೊವೀನಾ ಲೋಬೋ, ಡಾ. ಶಾಲಿನಿ ಅಯ್ಯಪ್ಪ, ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಕಲಾ ಉಪಸ್ಥಿತರಿದ್ದರು.