
ರಾಹೆ 66ರ ಅಪಘಾತ ಸ್ಥಳ ವೀಕ್ಷಿಸಿದ ಆರ್ಟಿಓ, ಪೊಲೀಸರು ಮತ್ತು ಟೋಲ್ ಅಧಿಕಾರಿ
ಉಚ್ಚಿಲ: ಉಡುಪಿ ಆರ್ಟಿಓ ಸಂತೋಷ್ ಶೆಟ್ಟಿ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಠಾಣಾಧಿಕಾರಿ ಪ್ರಸನ್ನ, ಯುಟಿಸಿಎಲ್ ಟೋಲ್ ಅಧಿಕಾರಿಗಳಾದ ಅಜಯ್ ಮತ್ತು ಶೈಲೇಶ್ ಶೆಟ್ಟಿಯವರು ಶನಿವಾರ ಮದ್ಯಾಹ್ನ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುವ ಅಪಘಾತ ಸ್ಥಳದ ವೀಕ್ಷಣೆ ನಡೆಸಿದರು.
ಈ ಸಂದರ್ಭ ಪಡುಬಿದ್ರಿ ಅಧಿಕಾರಿ ಪ್ರಸನ್ನ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆಯವರು ಅಪಘಾತ ನಡೆದ ಸ್ಥಳದ ಮಾಹಿತಿಯನ್ನು ಆರ್ಟಿಓ ಅಧಿಕಾರಿಗೆ ನೀಡಿದರು.
ಇದೇ ಸಂದರ್ಭ ಉಚ್ಚಿಲ ಅನಫ ಮಸೀದಿಯ ಎದುರು ಇರುವ ಯೂಟರ್ನ್ ರದ್ದುಗೊಳಿಸಿ, ಸುಮಾರು 200 ಮೀಟರ್ ದೂರದಲ್ಲಿರುವ ಹಳ್ಳಿ ಮನೆ ಹೋಟೆಲ್ ಎದುರುಗಡೆ ನಿರ್ಮಿಸಬೇಕೆಂದು ಆರ್ಟಿಓ ಅಧಿಕಾರಿಗೆ ಮನವರಿಕೆ ಮಾಡಿದ್ದಾರೆ. ಈಗ ಸರ್ವೀಸ್ ರೋಡಿನಲ್ಲಿ ಸಾಗುವವರು ಉಚ್ಚಿಲಕ್ಕೆ ಸಾಗಿ ಬರಲು ವಿರುದ್ಧ ಪಥದಲ್ಲಿ ಬರಬೇಕಿದೆ. ಇದರಿಂದ ಅಪಘಾತಗಳ ಸರಮಾಲೆಯೇ ಸಂಭವಿಸುತ್ತದೆ. ಇದೊಂದು ಅವೈಜ್ಞಾನಿಕ ತಿರುವು ಆಗಿದ್ದು, ಆದಷ್ಟು ಶೀಘ್ರವಾಗಿ ಇದನ್ನು ಸರಿಪಡಿಸಬೇಕೆಂದರು. ಈ ಬಗ್ಗೆ ಮುಂದೆ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಮಾತನಾಡುವುದಾಗಿ ಠಾಣಾಧಿಕಾರಿ ಪ್ರಸನ್ನ ಹೇಳಿದರು.
ಉಚ್ಚಿಲ ಪೇಟೆಯಲ್ಲಿಯೂ ತಿರುವು ಅಗತ್ಯ ಇದ್ದು, ಅದನ್ನೂ ಪರಿಶೀಲಿಸಬೇಕೆಂದು ಆರ್ಟಿಓಗೆ ಮನವರಿಕೆ ಮಾಡಲಾಯಿತು. ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಶೀಘ್ರವಾಗಿ ಸ್ಪೀಡ್ ಬ್ರೇಕರ್ ನಿರ್ಮಿಸಬೇಕು. ಹೆದ್ದಾರಿಯಲ್ಲಿ ಬ್ಲಿಂಕರ್ ಅಳವಡಿಸಿದರೆ, ರಾತ್ರಿ ಸಂಚಾರಕ್ಕೆ ಸುಗಮ ಆಗಲಿದೆ. ಈಗಾಗಲೇ ಕೆಇಬಿ ಅಧಿಕಾರಿಯವರೊಂದಿಗೆ ಮಾತುಕತೆ ನಡೆಸಲಾಗಿದ್ದು, ತುರ್ತಾಗಿ ಟ್ರಾನ್ಸ್ಫಾರ್ಮರ್ ಅಳವಡಿಸುವ ಭರವಸೆ ನೀಡಿದ್ದಾರೆ ಎಂದೂ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಟೋಲ್ ಅಧಿಕಾರಿಗೆ ಹೇಳಿದ್ದಾರೆ.