
ರೈಲಿನಲ್ಲಿ ಪ್ರಯಾಣಿಸುವಾಗ ಅಸ್ವಸ್ಥಗೊಂಡ ಮಹಿಳೆ ಸಾವು
ಉಡುಪಿ: ಮುಂಬೈಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 60ರ ಹರೆಯದ ಪ್ರಯಾಣಿಕೆಯೋರ್ವರು ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಮಹಿಳೆ ಮಗನೊಂದಿಗೆ ಮುಂಬೈಯಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದರು.
ಪ್ರಯಾಣದ ಹಾದಿಯಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು, ಆರೋಗ್ಯ ಸ್ಥಿತಿ ಅರಿತು, ಕೃತಕ ಉಸಿರಾಟದ ವ್ಯವಸ್ಥೆಗೊಳಿಸಿದ್ದರು. ರೈಲ್ವೇ ವೈದ್ಯಾಧಿಕಾರಿ ಡಾ. ಸ್ಟಿವನ್ ಜಾರ್ಜ್ ಅವರು ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಪಡೆದಾಗ, ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಿನಿಂದ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಗೊಳಿಸಿದರು. ಪರೀಕ್ಷಿಸಿದ ವೈದ್ಯರು ಮಹಿಳೆ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದರು.
ಏಕನಾಥ್ ಔಷಧಿ ಮಳಿಗೆ ಸಿಬ್ಬಂದಿ, ನಿಲ್ದಾಣ ನಿಯಂತ್ರಕ ಭಾನುಪ್ರಕಾಶ್, ರೈಲ್ವೇ ರಕ್ಷಣಾ ಘಟಕದ ಸುಧೀರ್ ಶೆಟ್ಟಿಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬದುಕಿಸುವ ಪ್ರಯತ್ನ ನಡೆಸಿದ್ದರು. ಮಹಿಳೆಯ ಹೆಸರು ತಿಳಿದುಬಂದಿಲ್ಲ.