
ಏಳು ಮಂದಿ ಕಾರ್ಮಿಕರಿಗೆ ತಂಡದಿಂದ ಹಲ್ಲೆ
Wednesday, January 8, 2025
ಉಳ್ಳಾಲ: ಉಳ್ಳಾಲ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಮೂಲದ ಏಳು ಮಂದಿ ಕಾರ್ಮಿಕರಿಗೆ ತಂಡವೊಂದು ಹಲ್ಲೆ ಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದೆ.
ಹಲ್ಲೆಗೊಳಗಾದವರನ್ನು ಪಶ್ಚಿಮ ಬಂಗಾಳ ಮೂಲದ ದೀಪಂಕರ್ ದಾಸ್, ಬೈಪಾಲವ್ ದಾಸ್, ಗಣೇಶ ಬೈಡಿಯಾ, ಆಕಾಶ್ ಗಯಾನ್, ಧನಂಜಯ ಮೊಂಡಾಲ್, ರಾಹುಲ್, ಪ್ರಶಾಂತ್ ಎಂದು ಗುರುತಿಸಲಾಗಿದೆ.
ಅವರು ಮಾಡೂರು ಬಳಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದು, ಮಂಗಳವಾರ ರಾತ್ರಿ ಐವರ ತಂಡ ಅವರ ವಾಸದ ಕೊಠಡಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಏಳು ಮಂದಿ ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ದೀಪಂಕರ್ ದಾಸ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.