
ಮಾ.8 ರಂದು ಮೂಡೂರು-ಪಡೂರು ಕಂಬಳ, ಮುಖ್ಯಮಂತ್ರಿಗಳ ಸಹಿತ ಸಚಿವರು ಭಾಗಿ
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 14ನೇ ವರ್ಷದ ಹೊನಲು ಬೆಳಕಿನ ‘ಮೂಡೂರು-ಪಡೂರು’ ಜೋಡುಕರೆ ಕಂಬಳವು ಮಾ.8 ರಂದು ನಡೆಯಲಿದ್ದು, ಈ ಬಾರಿಯ ಕಂಬಳ ಕೂಟದಲ್ಲಿ ವಿಶೇಷವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಹೋಟೆಲ್ ಸಭಾಂಗಣದಲ್ಲಿ ಕಂಬಳದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಯವರು ಭಾಗವಹಿಸುವ ಹಿನ್ನಲೆಯಲ್ಲಿ ಕಂಬಳ ಕೂಟವನ್ನು ವೈಶಿಷ್ಠಪೂರ್ಣ ಮತ್ತು ಅದ್ದೂರಿಯಾಗಿ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಜೊತೆಗೆ ಸ್ಪೀಕರ್ ಯು.ಟಿ. ಖಾದರ್, ರಾಜ್ಯದ ಸಚಿವರುಗಳಾದ ಡಾ. ಪರಮೇಶ್ವರ್, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಸಹಿತ ಶಾಸಕರು, ವಿ.ಪ.ಸದಸ್ಯರು, ಮಾಜಿ ಸಚಿವರು, ಹಲವಾರು ಗಣ್ಯರು ಅಗಮಿಸಲಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಯವರು ಅಂದು ಮಲೆಮಹಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಬಳಿಕ ವಿಶೆಷ ವಿಮಾನದಲ್ಲಿ ನೇರವಾಗಿ ಸಚಿವರುಗಳೊಂದಿಗೆ ಕಂಬಳಕೂಟಕ್ಕೆ ಬರಲಿದ್ದಾರೆ. ಅಂದು ರಾತ್ರಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಬೆಳಿಗ್ಗೆ ಮೈಸೂರಿಗೆ ತೆರಳಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಾಗಿದ್ದಾಗ ಬಂಟ್ವಾಳಕ್ಕಾಗಮಿಸಿ ಸಾವಿರಾರು ಕೋಟಿ ರೂ.ವಿನ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಸಂತಸಪಟ್ಟಿದ್ದರು. ಇದೀಗ ಎರಡನೇ ಬಾರಿಗೆ ಬಂಟ್ವಾಳಕ್ಕಾಗಮಿಸುತ್ತಿರುವ ಹಿನ್ನಲೆಯಲ್ಲಿ ಸಮಸ್ತ ಬಂಟ್ವಾಳದ ಜನತೆ ಅವರನ್ನು ಸ್ವಾಗತಿಸುವಂತೆ ರಮಾನಾಥ ರೈ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಬಾರಿ ಕಂಬಳದ ಕರೆಗೂ ಹೊಸ ಆಯಾಮವನ್ನು ನೀಡಲಾಗಿದ್ದು, ಜನಾಕರ್ಷಣೀಯವನ್ನಾಗಿಸಲಾಗಿದೆ. ಮೂಡೂರು-ಪಡೂರು ಜೋಡುಕರೆ ಕಂಬಳ ‘ಬಂಟ್ವಾಳ ಕಂಬಳ’ವಾಗಿ ಸಾರ್ವಜನಿಕ ಹಾಗೂ ಅವಿಭಜಿತ ಜಿಲ್ಲೆಯ ಕಂಬಳ ವಲಯದಲ್ಲಿಯೇ ವಿಶೇಷವಾದ ಮಾನ್ಯತೆಯನ್ನು ಪಡೆದಿದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಮಾತನಾಡಿ, ಕಂಬಳವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ವೈಭವಯುತವಾಗಿ ನಡೆಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಸಕಲ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಕಂಬಳದ ಮೊದಲು ಮತ್ತು ನಂತರ ಸ್ವಚ್ಚತೆಯ ಜವಾಬ್ದಾರಿ ವಹಿಸಿಕೊಂಡು ನಿರ್ವಹಿಸುತ್ತಿದ್ದ ಕಂಬಳ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದ ದಿವಂಗತ ಅಲ್ಬಟ್೯ ಪಾಯಸ್ ಅವರ ಸ್ಮರಣಾರ್ಥ ವೇದಿಕೆಗೆ ಅವರ ಹೆಸರನ್ನಿರಿಸಲಾಗಿದೆ ಎಂದು ಅವರು ವಿವರಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರ.ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಸಮಿತಿ ಪ್ರಮುಖರಾದ ಬೇಬಿ ಕುಂದರ್, ಅಬ್ಬಾಸ್ ಆಲಿ, ಬಾಲಕೃಷ್ಣ ಅಂಚನ್ ಚಂದ್ರಶೇಖರ ಭಂಡಾರಿ, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಪದ್ಮನಾಭ ರೈ, ಶಬೀರ್ ಸಿದ್ದಕಟ್ಟೆ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ ಬಂಟ್ವಾಳ, ಸುರೇಶ್ ಕುಲಾಲ್ ನಾವೂರ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ಬಿ.ಮೋಹನ್, ದೇವಪ್ಪ ಕುಲಾಲ್ ಪಂಜಿಕಲ್ಲು, ಸದಾಶಿವ ಬಂಗೇರ, ಉಮೇಶ್ ಕುಲಾಲ್ ನಾವೂರ, ಮಹಮ್ಮದ್ ನಂದಾವರ,ಜಾನ್ ಸಿರಿಲ್ ಡಿಸೋಜಾ, ರಾಜೀವ ಕಕ್ಯೆಪದವು, ಓಬಯ್ಯ, ಡೆನ್ಜಿಲ್ ನೊರೋನ್ಹ, ಪ್ರವೀಣ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.