
ಸರಕಾರಿ ಜಾಗಕ್ಕೆ ಸರಪಳಿ ಬೇಲಿ, ಶಾಸಕರಿಂದ ಅಧಿಕಾರಿಗಳ ತರಾಟೆ
Wednesday, February 12, 2025
ಬಂಟ್ವಾಳ: ಇಲ್ಲಿಯ ತಾ.ಪಂ.ನ ಎಸ್ಜಿಎಸ್ವೈ ಸಭಾಂಗಣದ ಮುಂಭಾಗ ಅಧಿಕಾರಿಗಳ ವಾಹನ ನಿಲುಗಡೆಗಾಗಿ ಖಾಲಿ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಸರಪಳಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬುಧವಾರ ತಾ.ಪಂ. ಕಚೇರಿಗೆ ಹಠಾತ್ ಭೇಟಿ ನೀಡಿ ಮಾಹಿತಿ ಪಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರಸ್ತೆಯನ್ನು ಕಬಳಿಸುವಂತೆ ಖಾಲಿ ಜಾಗಕ್ಕೆ ಕಬ್ಬಿಣದ ಸರಪಳಿಯ ಬೇಲಿ ಹಾಕಿರುವುದನ್ನು ಕ್ರಮವನ್ನು ಕಚೇರಿಯಲ್ಲಿದ್ದ ಅಧಿಕಾರಿಗಳಲ್ಲಿ ಪ್ರಶ್ನಿಸಿದರು.
ಅಗತ್ಯದ ಕೆಲಸಕ್ಕಾಗಿ ಸರಕಾರಿ ಕಚೇರಿಗೆ ಬರುವಂತ ಸಾರ್ವಜನಿಕರು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ತಾಲೂಕು ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವವರು ವಾಹನಗಳಿಗೆ ಎಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಅಧಿಕಾರಗಳಲ್ಲಿ ಶಾಸಕರು ಪ್ರಶ್ನಿಸಿದರಲ್ಲದೆ ಸರಕಾರಿ ಜಾಗವನ್ನು ಸ್ವಂತ ಜಾಗದಂತೆ ಬೇಲಿ ಹಾಕಲು ಅನುಮತಿ ನೀಡಿದವರು ಯಾರು? ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅವರು ರಜೆಯಲ್ಲಿದ್ದ ಕಾರಣಕ್ಕೆ ಪೋನ್ ಮೂಲಕ ಅವರನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.
ಶಾಸಕರೊಂದಿಗೆ ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ, ಪ್ರಮುಖರಾದ ಡೊಂಬಯ್ಯ ಅರಳ ಮತ್ತಿತರರಿದ್ದರು.