
ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಲೈಂಗಿಕ ಹಿಂಸೆ ಎದುರಿಸುವ ಅರಿವು ಅಗತ್ಯ: ಧನ್ಯಶ್ರೀ
ಬಂಟ್ವಾಳ: ಮಕ್ಕಳು ಮಾನಸಿಕವಾಗಿ ಸದೃಢರಾದಾಗ ದೇಶದ ಆಸ್ತಿಯಾಗಲಿದ್ದು, ಅದಕ್ಕಾಗಿ ಸಾಮಾಜಿಕ ಪಿಡುಗುಗಳ ಕುರಿತಾದ ಅರಿವು ಮಕ್ಕಳಿಗೆ ಇರಬೇಕಾಗುತ್ತದೆ. ಇದು ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ತನ್ನ ಸಹಪಾಠಿಗಳಿಗೇನಾದರೂ ತೊಂದರೆ ಎದುರಾದರೂ ಉಪಯೋಗಕ್ಕೆ ಬರುತ್ತದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಧನ್ಯಶ್ರೀ ಹೇಳಿದರು.
ಬಂಟ್ವಾಳ ತಾ.ನ ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ನಡೆಸಲದಾ ‘ವ್ಯಸನ ಮುಕ್ತ ಜೀವನ’ ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲಾ ಕಲಿಕಾ ಅವಧಿಯಲ್ಲೇ ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಸುರಕ್ಷಿತ ಮತ್ತು ಅಸುರಕ್ಷಿತ ಟಚ್, ಮಾದಕ ವ್ಯಸನಗಳ ಅಪಾಯಗಳ ಕುರಿತಾದ ಅರಿವು ಬಹುಮುಖ್ಯವಾಗಿ ಬೇಕಾಗಿದೆ ಎಂದ ಅವರು ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ಸೈಬರ್ ಅಪರಾಧ ಕೃತ್ಯಕ್ಕೆ ಬಲಿಯಾಗುತ್ತಿದ್ದು, ಮೊಬೈಲ್ ಕೂಡ ಗೀಳಾಗಿ ಪರಿಣಮಿಸದಂತೆ ಎಚ್ಚರವಹಿಸಬೇಕು, ಪೋಷಕರು ಈ ನಿಟ್ಟಿನಲ್ಲಿ ಮಾದರಿಯಾದಾಗ ಮಕ್ಕಳು ಅದನ್ನು ಅನುಸರಿಸುತ್ತಾರೆ ಎಂದರು.
ಮಂಗಳೂರಿನ ಲಿಂಕ್-ಅಮಲು ಚಿಕಿತ್ಸಾ ಸಮಗ್ರ ಪುನರ್ವಸತಿ ಕೇಂದ್ರದ ಆಡಳಿತಾಧಿಕಾರಿ ಲಿಡಿಯಾ ಲೋಬೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮಕ್ಕಳು ಕುತೂಹಲಕ್ಕಾಗಿ ಚಟಕ್ಕೆ ಆಕರ್ಷಿತರಾಗುತ್ತಾರೆ, ಮಾಹಿತಿ ಕೊರತೆಯಿಂದಾಗಿ ತನಗೆ ಅರಿವಿಲ್ಲದೆ ದುಶ್ಚಟಕ್ಕೆ ಬಲಿಯಾಗುತ್ತಾರೆ. ಜೀವನ ಸಮಾರ್ಪಕ ಬದುಕಲು ಮಕ್ಕಳಿಗೆ ಮಾಹಿತಿಯ ಅಗತ್ಯವಿದ್ದು, ಅನೇಕ ಶಾಲೆಗಳಲ್ಲಿ ಮಕ್ಕಳು ಚಟಕ್ಕೆ ಬಲಿಯಾಗಿರುವ ಘಟನೆಗಳು ಕಂಡು ಬಂದಿದ್ದು, ಬ್ರಹ್ಮರಕೂಟ್ಲು ಶಾಲಾ ಮಕ್ಕಳಿಗೆ ಮಾಹಿತಿ ನೀಡುವ ಮೂಲಕ ಅವರ ಜೀವನ ಜೋಪಾನ ಮಾಡಲು ಮುಂದಾಗಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಜ್ಯೋತಿಗುಡ್ಡೆ, ಮುಖ್ಯೋಪಾಧ್ಯಾಯನಿ ಕಲ್ಯಾಣಿ ಜಿ., ಬಂಟ್ವಾಳ ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ದುರ್ಗಪ್ಪ ಎಚ್. ಕಲಘಟ್ಟಿಗಿ, ಕಾನ್ಸ್ಟೇಬಲ್ ಅಜಯ್ ಕುಮಾರ್, ದತ್ತು ಸ್ವೀಕಾರ ಸಮಿತಿ ಅಧ್ಯಕ್ಷ ಮಧುಸೂದನ್ ಶೆಣೈ ಉಪಸ್ಥಿತರಿದ್ದರು.
ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ವಿಶ್ವನಾಥ ದರಿಬಾಗಿಲು ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಕಲ್ಯಾಣಿ ಜಿ. ವಂದಿಸಿ, ಶಿಕ್ಷಕಿ ಮಂಜುಳಾ ರಾವ್ ಕಾರ್ಯಕ್ರಮ ನಿರೂಪಿಸಿದರು.