
ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ
Wednesday, February 26, 2025
ಕೊಣಾಜೆ: ಯಕ್ಷಮಿತ್ರರು ಅಸೈಗೋಳಿ ಇದರ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ, ದಿವಾಣ ಶಿವಶಂಕರ ಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ರಘು ಶೆಟ್ಟಿ ನಾಳ ಹಾಗೂ ಅಸೈಗೋಳಿಯ ಉದಯ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನದ ಬೆಳವಣಿಗೆಗೆ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಯಕ್ಷಮಿತ್ರರು ಅಸೈಗೋಳಿ ವತಿಯಿಂದ ಕಳೆದ ಐದು ವರ್ಷದಿಂದ ನಿರಂತರವಾಗಿ ಯಕ್ಷಗಾನ ಸೇವೆಯು ನಡೆಯುತ್ತಿದೆ. ದೇವರು ಹಾಗೂ ಕಲಾಮಾತೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದರು.
ಕಲಾವಿದರಾದ ಸುಬ್ರಾಯ ಹೊಳ್ಳ ಕಾಸರಗೋಡು ಮಾತನಾಡಿ, ನಾವೆಲ್ಲರೂ ಹಿರಿಯ ಕಲಾವಿದರನ್ನು ನೋಡಿ ಬೆಳೆದು ಬಂದವರು. ಯಕ್ಷಗಾನ ರಂಗದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮಗಳು ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಕ್ಷಮಿತ್ರರು ಅಸೈಗೋಳಿ ಯ ಅದ್ಯಕ್ಷರಾದ ರವಿಶಂಕರ್ ಭಟ್ ಅಸೈಗೋಳಿ, ಸದಸ್ಯರುಗಳಾದ ಪರಮೇಶ್ವರ ಭಟ್, ಶಬರೀಶ್ ಭಟ್, ಅರುಣ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ವಿನಯಕೃಷ್ಣ ಕುರ್ನಾಡು ಕಾರ್ಯಕ್ರಮ ನಿರೂಪಿಸಿದರು.