
ಕಲಾ ನರ್ತನ ಡಾನ್ಸ್ ಕ್ರೀವ್ (ರಿ.) ಜನ್ನಾಡಿ ಇದರ ಕಲಾನರ್ತನ ಸಂಭ್ರಮ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆ
ಕುಂದಾಪುರ: ಕಲಾನರ್ತನ ಡಾನ್ಸ್ ಕ್ರೀವ್ (ರಿ.) ಜನ್ನಾಡಿ ಇದರ ಕಲಾನರ್ತನ ಸಂಭ್ರಮ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯು ಇತ್ತೀಚಿಗೆ ಜನ್ನಾಡಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಲಾನರ್ತನ ಸಂಭ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಬ್ರಹ್ಮಾವರದ ಕಾರ್ಯ ನಿರ್ವಹಣಾಧಿಕಾರಿ ಹೆಚ್.ವಿ. ಇಬ್ರಾಹಿಂಪುರ ಅವರು ದೀಪ ಪ್ರಜ್ವಲಿಸಿ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಂಸ್ಥೆಗಳು ಹುಟ್ಟುವುದು ಸುಲಭ, ಬೆಳೆಯುವುದು ಕಷ್ಟ. ಆದರೆ, ಕುಗ್ರಾಮದ ಈ ಸಂಸ್ಥೆ ಬೆಳೆದ ಪರಿ ಅನನ್ಯ ಎಂದು ಶ್ಲಾಘಿಸಿದರು.
ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ‘ಕಲಾನರ್ತನ ಪುರಸ್ಕಾರ’ ಪ್ರದಾನ ಮಾಡಿ ಪುರಸ್ಕೃತರಿಗೆ ಶುಭಹಾರೈಸಿದರು. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ‘ಸ್ನೇಹ ಪಲ್ಲಕ್ಕಿ ಪುರಸ್ಕಾರ’ ಪ್ರದಾನ ಮಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶಂಕರ್ ಹೆಗ್ಡೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೂರದ ಶಿರೂರಿನ ನೀರ್ಜೆಡ್ಡಿನ ಮನೀಶ್ ಅವರು ಜನ್ನಾಡಿಯಲ್ಲಿ ನೃತ್ಯ ಶಾಲೆ ಆರಂಭಿಸಿದಾಗ ಸಂಸ್ಥೆ ಹೇಗೆ ಬೆಳೆಯುತ್ತದೆ ಎಂಬುದರ ಬಗ್ಗೆ ಅನುಮಾನ ಇತ್ತು. ಆದರೆ, ವರ್ಷದಿಂದ ವರ್ಷಕ್ಕೆ ಈ ಸಂಸ್ಥೆ ಬೆಳೆದ ಪರಿಯನ್ನು, ಬೆಳೆಸಿದ ಪರಿಯನ್ನು ಹತ್ತಿರದಿಂದ ನೋಡಿ ಪ್ರೋತ್ಸಾಹ ನೀಡುತ್ತಾ ಬಂದಿದ್ದೀನಿ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.
ಹರಿಪ್ರಸಾದ್ ಶೆಟ್ಟಿ, ನಾರಾಯಣ ಕುಲಾಲ್, ಗುರುಪ್ರಸಾದ್ ಶಿರೂರು, ಪ್ರತಾಪ್ ಹೆಗ್ಡೆ ಮಾರಾಳಿ, ರವಿ ಕುಲಾಲ್, ಡಾ. ರಮೇಶ್ ಶೆಟ್ಟಿ, ಜಯರಾಮ್ ಕುಲಾಲ್, ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸಂಸ್ಥಾಪಕರಾದ ಮನೀಶ್ ಕುಲಾಲ್ ಉಪಸ್ಥಿತರಿದ್ದರು.
ವಿಜಯಲಕ್ಷ್ಮೀ ಮೆಟ್ಟಿನಹೊಳೆ ಪ್ರಾರ್ಥಿಸಿದರು. ರೇಖಾ ಪ್ರಭಾಕರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರೂಪಕ ಮಂಜುನಾಥ್ ಹಿಲಿಯಾಣ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ರಾಜ್ಯ ಮಟ್ಟದ ನೃತ್ಯ ಕಾರ್ಯಕ್ರಮ ಜನ ಮನ್ನಣೆಗೆ ಪಾತ್ರವಾಯಿತು. ಕಲಾನರ್ತನ ವಿದ್ಯಾರ್ಥಿಗಳ ಆಕರ್ಷಕ ನೃತ್ಯ ವೈಭವ ಹಾಗೂ ಜನ್ನಾಡಿ ಉತ್ಸವದ ಸಂಗೀತ ಸಂಜೆ ಈ ಬಾರಿಯ ವೈಶಿಷ್ಟ್ಯತೆ ಆಗಿತ್ತು.