
ಮುಂದುವರಿದ ಶಿಷ್ಟಾಚಾರ ವಿವಾದ: ಸಚಿವ ಗುಂಡುರಾವ್-ಶಾಸಕ ಕಾಮತ್ ನಡುವೆ ಮಾತಿನ ಚಕಮಕಿ
ಮಂಗಳೂರು: ಮಂಗಳಾದೇವಿಯ ಜಿಲ್ಲಾ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆಯ ಉದ್ಘಾಟನೆ ಹುಟ್ಟು ಹಾಕಿದ ಶಿಷ್ಟಾಚಾರದ ವಿವಾದ ಮತ್ತೆ ಜಿಲ್ಲಾ ಕೆಡಿಪಿ ಸಭೆಯಲ್ಲಿ ಮುಂದುವರಿದಿದ್ದು ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಮಧ್ಯೆ ಬಿರುಸಿನ ಮಾತಿನ ಚಕಮಕಿಗೆ ಕಾರಣವಾಯಿತು.
ಯಾರೋ ಬಂದು ಆಮಂತ್ರಣ ಕೊಟ್ಟಿದ್ದಾರೆ, ಮೊದಲ ಉದ್ಘಾಟನೆ ಆಮಂತ್ರಣ ಪತ್ರಿಕೆಯಲ್ಲಿ ನಿಮ್ಮ, ಸ್ಪೀಕರ್ ಹಾಗೂ ಎಲ್ಲರ ಫೋಟೊ ಇತ್ತು, ಹಾಗಾಗಿ ಅದು ಅಧಿಕೃತ ಅಂತ ನಾನು
ಉದ್ಘಾಟನೆಗೆ ಹೋಗಿದ್ದೆ, ಆದರೆ ಎರಡನೇ ಕಾರ್ಯಕ್ರಮದ ಬಗ್ಗೆ ನನಗೆ ಅಧಿಕೃತ ಆಮಂತ್ರಣ ಕೊಟ್ಟಿಲ್ಲ, ಅ ಕಾರ್ಯಕ್ರಮದಲ್ಲಿ ನೀವು ನನ್ನ ವಿರುದ್ದ ಮಾತನಾಡಿದ್ದೀರಿ ಎಂದು ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಆಹ್ವಾನ ಪತ್ರಿಕೆ ಕೊಟ್ಟವರು ಯಾರು? ಎಂದು ಪಾಲಿಕೆ ಆಯುಕ್ತರಲ್ಲಿ ಸಚಿವರು ವಿಚಾರಿಸಿದರು. ಮೊದಲ ಉದ್ಘಾಟನೆ ಅಧಿಕೃತವಲ್ಲ, ನಾವು ಅಧಿಕೃತ ಆಹ್ವಾನ ಪತ್ರವನ್ನು ಶಾಸಕರಿಗೆ ತಲಪಿಸಿದ್ದೇವೆ ಎಂದು ಆಯುಕ್ತರು ತಿಳಿಸಿದರು.
ಮೂರು ಮೂರು ಕಟ್ಟಡ ಉದ್ಘಾಟನೆ ಇದ್ದರೂ ನನಗೆ ಮಾಹಿತಿ ಕೊಟ್ಟಿಲ್ಲ,. ನನ್ನಲ್ಲಿ ದಿನಾಂಕ ಕೇಳಿಲ್ಲ, ಇಷ್ಟುದೊಡ್ಡ ಕಾರ್ಯಕ್ರಮವನ್ನು ನಿಗದಿ ಮಾಡಬೇಕಾದರೆ ಅದರ ಹಿಂದೆ ಯಾರಾದರೂ ಇರಬೇಕಲ್ವ, ಇಲ್ಲವಾದರೆ ನಿಮಗೆ ಮಾತ್ರ ಆಹ್ವಾನ ಪತ್ರಿಕೆ ಬಂದಿದ್ದು ಏನಾದರೂ ಪವಾಡವೇ ಎಂದು ಸಚಿವರು ತಿರುಗೇಟು ನೀಡಿದರು. ಅಲ್ಲದೆ ಇಲ್ಲಿ ಮಾಧ್ಯಮದ ಗಮನ ಸೆಳೆಯಲು ಈ ರೀತಿ ಮಾತನಾಡುತ್ತಿದ್ದೀರಿ ಕುಳಿತುಕೊಳ್ಳಿ ಎಂದರು.
ಇದರಿಂದ ಕೆರಳಿದ ಶಾಸಕರು ಇಂತಹ ಮಾತನಾಡಬೇಡಿ, ನಾನು ಇಲ್ಲಿ ಸದಸ್ಯ, ನನ್ನ ವಿರುದ್ಧ ಆರೋಪ ಮಾಡಿದ್ದೀರಿ ಅದನ್ನು ಸಾಬೀತು ಮಾಡಿ ಎಂದರು. ಮಾಡೋದೆಲ್ಲ ಮಾಡಿ ಈಗ ನಾಟಕ ಮಾಡಬೇಡಿ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.