
ಅಕ್ರಮ ಮರಳುಗಾರಿಕೆ ವ್ಯವಸ್ಥೆಯಲ್ಲಿರುವ ಸಮಸ್ಯೆ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ದ.ಕ. ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ವಿಚಾರ ಎನ್ನುವುದು ಈ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ. ಒಂದು ಕಡೆ ಬೇಡಿಕೆ ಇದೆ, ಮತ್ತೊಂದು ಕಡೆ ಅಧಿಕೃತ ಮರಳು ತೆಗೆಯಲು ಅವಕಾಶ ಕೊಟ್ಟರೂ ತೆಗಿಯುತ್ತಿಲ್ಲ. ಸುಲಭವಾಗಿ ಸಿಗುವ ಮರಳಿನ ಮೇಲೆ ಕೆಲವರ ಕಣ್ಣಿದೆ. ಹಾಗಾಗಿ ಇದು ಇಂದು ನಿನ್ನೆಯ ಯಾವುದೇ ಸಮಸ್ಯೆ ಅಲ್ಲ. ಎಲ್ಲರೂ ಕೈ ಜೋಡಿಸಿದರೆ ಇದನ್ನು ಸರಿಪಡಿಸಲು ಅವಕಾಶ ಇದೆ. ಈ ಬಗ್ಗೆ ಇಲಾಖೆ ಸಭೆಯಲ್ಲಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸೇತುವೆ ಹತ್ತಿರವೂ ಮರಳು ಬಿಟ್ಟಿಲ್ಲ ಎಂದರೆ ಮುಂದೆ ಕೋಟ್ಯಂತರ ರು. ನಷ್ಟ ಆಗುತ್ತದೆ. ಜಿಲ್ಲೆಯಲ್ಲಿ ಕರ್ತವ್ಯ ಲೋಪದ ಆರೋಪಕ್ಕೆ ಗುರಿಯಾಗಿರುವ ಗಣಿ ಅಧಿಕಾರಿ ವಿಚಾರವಾಗಿ ಗಣಿ ಇಲಾಖೆ ಸಚಿವರ ಜೊತೆ ಮಾತನಾಡುತ್ತೇನೆ. ಮುಂದೇನು ಮಾಡಬೇಕು ಎಂಬುದನ್ನು ವಿಚಾರಿಸುತ್ತೇನೆ ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ
ಮಕ್ಕಳ ತಜ್ಞರ ವೇತನ ಹೆಚ್ಚಳಕ್ಕೆ ಕ್ರಮ...
ರಾಜ್ಯದಲ್ಲಿ ಅನಸ್ತೇಷಿಯಾ, ಗೈನೆಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ಮಾಸಿಕ ವೇತನ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಪ್ರಸ್ತಾಪಿಸಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಸ್ತೇಷಿಯಾ, ಗೈನೆಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ಕೊರತೆ ಇದೆ. ಈ ಹುದ್ದೆಗಳ ನೇಮಕಾತಿಗೆ ಯಾರೂ ಮುಂದೆ ಬರುತ್ತಿಲ್ಲ ಎಂದು ಪ್ರಸ್ತಾಪಿಸಿದ್ದರು.
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಖಾತರಿಗೆ ತಾಂತ್ರಿಕ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ಕುರಿತು ಕೆಡಿಪಿ ಸದಸ್ಯ ಮೆಲ್ವಿನ್ ಡಿ. ಸೋಜಾ ಪ್ರಸ್ತಾಪಿಸಿ, ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯ ಇದ್ದರೂ ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರೇ ಸರಿಯಾಗಿ ಬರುತ್ತಿಲ್ಲ ಎಂದು ಗಮನ ಸೆಳೆದಿದ್ದರು.