ದೌರ್ಜನ್ಯ ಪ್ರಕರಣಗಳ ಸಮರ್ಪಕ ಪರಿಶೀಲನೆಯಾಗಲಿ: ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ಆಗ್ರಹ

ದೌರ್ಜನ್ಯ ಪ್ರಕರಣಗಳ ಸಮರ್ಪಕ ಪರಿಶೀಲನೆಯಾಗಲಿ: ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ಆಗ್ರಹ


ಮಂಗಳೂರು: ದಲಿತ ದೌರ್ಜನ್ಯ ಪ್ರಕರಣಗಳ ಸಂದರ್ಭ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಸರಿಯಾಗಿ ಪರಿಶೀಲನೆ ನಡೆಸದೆ, ಸೂಕ್ತ ಕ್ರಮ ವಹಿಸದೆ,  ದೌರ್ಜನ್ಯ ನಡೆಸಿದವರ ಪರ ವಹಿಸುವ ಸಂಗತಿಗಳೂ ನಡೆಯುತ್ತಿದ್ದು, ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ. ಕಾಯ್ದೆಯ ಕುರಿತಂತೆ ಹಿರಿಯ ಪೊಲೀಸ್ ಅದಿ ಕಾರಿಗಳು ಠಾಣಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರಕರಣದ ಬಗ್ಗೆ ಸಮಪರ್ಕ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಎಂಬ ಒತ್ತಾಯ ದಲಿತ ನಾಯಕರಿಂದ ವ್ಯಕ್ತವಾಗಿದೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವ್ಯಾಪ್ತಿ ಹಾಗೂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಡೆದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಮಾಸಿಕ ಕುಂದುಕೊರತೆಯ ಜಂಟಿ ಸಭೆಯಲ್ಲಿ ದಲಿತ ಮುಖಂಡ ದೇವದಾಸ್ ಎಂ. ಈ ಅಭಿಪ್ರಾಯ ವ್ಯಕ್ತಪಡಿಸಿದರು.


ಅಸ್ಪಶ್ಯತೆ ನಿರ್ಮೂಲನೆಯ ಉದ್ದೇಶದಿಂದ ರಚಿಸಲ್ಪಟ್ಟದಲಿತ ದೌರ್ಜನ್ಯ ಕಾಯ್ದೆಯು ತಿದ್ದುಪಡಿಯೊಂದಿಗೆ ಅನುಷ್ಠಾನಗೊಂಡಿದ್ದರೂ, ದಲಿತರ ಮೇಲೆ ದೌರ್ಜನ್ಯ ನಡೆದ  ವೇಳೆ ಪ್ರಕರಣದ ಕೂಲಂಕುಷ ತನಿಖೆ ನಡಸದೆ ಹಿಂಬರಹ ನೀಡಿ ಪ್ರಕರಣ ಮುಗಿಸುವ ಕಾರ್ಯ ನಡೆಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ರಾಜಯ್ಯ ಎಂಬವರ ಮೇಲೆ  ಪಕ್ಕದ ಮನೆಯವರು ದೌರ್ಜನ್ಯ ಎಸಗಿ ಜಾತಿ ನಿಂದನೆ ಮಾಡಿದ ಕುರಿತು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸರಿಯಾಗಿ ಪರಿಶೀಲನೆ ಮಾಡದೆ ಹಿಂಬರಹ  ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರ ಗಮನಕ್ಕೂ ತರಲಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ ಎಂದು ದೇವದಾಸ್ ಆಕ್ಷೇಪಿಸಿದರು.

ದಲಿತ ದೌರ್ಜನ್ಯ ಪ್ರಕರಣ ದಾಖಲಾದ ಸಂದರ್ಭ ಎಸಿಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಿದ್ದು, ಈ ಸಂದರ್ಭ ಎರಡೂ ಕಡೆಯ ವಾದಗಳನ್ನು ಆಲಿಸಲಾಗುತ್ತದೆ. ಆ ನಿಟ್ಟಿನಲ್ಲಿಯೇ ಕ್ರಮವನ್ನು ವಹಿಸಲಾಗುತ್ತದೆ. ಠಾಣಾ ಮಟ್ಟದಲ್ಲಿ ಯಾವುದೇ ಲೋಪ ಆಗಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಸೂಕ್ತ ಕ್ರಮ ವಹಿ ಸಲಾಗುತ್ತದೆ ಎಂದು ಡಿಸಿಪಿ ಸಿದ್ದಾಥ್‌ರ್ ಗೋಯಲ್ ತಿಳಿಸಿದರು.

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ 112ನಿಂದ ಸಿಗದ ಸ್ಪಂದನೆ!

ಕೋಟೆಕಾರು ಸಹಕಾರಿ ಬ್ಯಾಂಕ್‌ನ ದರೋಡೆ ಪ್ರಕರಣದ ಸಂದರ್ಭ ಸಮೀಪದ ಮಹಿಳೆಯೊಬ್ಬರು 112ಗೆ ಕರೆ ಮಾಡಿದ್ದರೂ ಸ್ಪಂದನೆ ದೊರಕಿಲ್ಲ.  ಸಹಕಾರಿ ಬ್ಯಾಂಕ್ ನಲ್ಲಿ ಸೂಕ್ತವಾದ ಸಿಸಿಟಿವಿ ಹಾಗೂ ಸೈರನ್ ವ್ಯವಸ್ಥೆ ಇಲ್ಲದಿರುವುದು, ವಾಚ್‌ಮೆನ್ ನೇಮಕ ಮಾಡದಿರುವ ಮೂಲಕ ತೀರಾ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ  ಸಹಕಾರಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಗಿರೀಶ್‌ಕುಮಾರ್ ಎಂಬವರು ಆಗ್ರಹಿಸಿದರು.

ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಇಂತಹ ಪ್ರಕರಣದಲ್ಲಿ ಈ  ರೀತಿಯಾಗಿ ನಿರ್ಲಕ್ಷ್ಯ ಆಗಿದೆ ಎಂದಾಗಿದಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಡಿಸಿಪಿ ಸಿದ್ಧಾಥ್‌ರ್ ಗೋಯಲ್, ಘಟನೆಯ ಬಳಿಕ ಈಗಾಗಲೇ ಪೊಲೀಸ್ ಆಯುಕ್ತರು  ನಗರದ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಬ್ಯಾಂಕ್‌ಗಳ ಸಭೆ ನಡೆಸಿ ಸೂಕ್ತ ಭದ್ರತಾ ವ್ಯವಸ್ಥೆಗೆ ಸೂಚನೆ ನೀಡಿದ್ದಾರೆ ಎಂದರು.

ಉಳ್ಳಾಲದಲ್ಲಿ ಮರಳು ಮಾಫಿಯಾ, ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಗಿರೀಶ್ ಕುಮಾರ್, ಪೊಲೀಸ್ ಠಾಣೆಗಳ ಸಿಬ್ಬಂದಿಯಿಂದಲೇ  ಇಂತಹ ಅಕ್ರಮಗಳಿಗೆ ಸಹಕಾರ ದೊರೆಯುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಐದು ವರ್ಷ ಮೇಲ್ಪಟ್ಟು ಠಾಣೆಗಳಲ್ಲಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು  ಎಂದು ಆಗ್ರಹಿಸಿದರು.

ಬಗೆಹರಿಯದ ಬಾಳೆಪುಣಿಯ ತ್ಯಾಜ್ಯ ಘಟಕದ ಸಮಸ್ಯೆ

ಬಾಳೆಪುಣಿಯ ಸುಮಾರು 15 ಕೊರಗ ಕುಟುಂಬಗಳು ವಾಸವಿರುವ ಪ್ರದೇಶದಲ್ಲಿ ತ್ಯಾಜ್ಯ ಘಟಕವನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ದೂರು ನೀಡಿದರೂ ಕ್ರಮವಾಗಿಲ್ಲ. ಅಲ್ಲಿನ ಕುಡಿಯುವ ನೀರಿನ ಬಾವಿ ಹಾಗೂಬೋರ್‌ವೆಲ್‌ಗಳಿಗೆ ಘಟಕದ  ಕಲುಷಿತ ನೀರು ಸೇರ್ಪಡೆಯಾಗುತ್ತಿದ್ದು, ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ ಎಂದು ದಲಿತ ಮುಖಂಡ ಆನಂದ್ ಎಸ್.ಪಿ.ಯವರು ದೂರಿದರು. ಸ್ಥಳೀಯ ನಿವಾಸಿ ಬಾಬು ಎಂಬವರೂ ಮಾತನಾಡಿ, ಅಲ್ಲೇ ಪಕ್ಕದಲ್ಲಿರುವ ಅಂಗನವಾಡಿಗೆ ತೆರಳುವ ಇಬ್ಬರು ಮಕ್ಕಳಿಗೆ ತ್ಯಾಜ್ಯದ ಬಳಿ ಓಡಾಡುವ ನಾಯಿ ಕಚ್ಚಿ ಆಸ್ಪತ್ರೆಗೆ ದಾಖಲಾಗುವಂತೆ ಆಗಿದೆ ಎಂದು ದೂರಿದರು.

ನಗರದ ವಿವಿಧೆಡೆ ಮೈಕ್ರೋ ಫೈನಾನ್ಸ್‌ಗಳ ಮೂಲಕ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಫೈನಾನ್ಸ್ ಸಂಸ್ಥೆಯೊಂದರಿಂದ ಮಧ್ಯವರ್ತಿಯೊಬ್ಬ ದಲಿತರೊಬ್ಬರಿಗೆ 5 ಲಕ್ಷ ರೂ. ಸಾಲ ಕೊಡಿಸಿ, ಚೆಕ್ ಪಡೆದು ಪೂರ್ಣ ಹಣ ನೀಡದೆ, ಬಳಿಕ ಹಣ ಸಂದಾಯಕ್ಕೆ ಪೀಡಿಸುತ್ತಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ಆನಂದ್‌ರವರು ದೂರಿದರು.

ಸ್ಥಳೀಯ ಠಾಣಾ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿ, 5 ಲಕ್ಷ ಸಾಲವನ್ನು ಅರ್ಜಿದಾರರಿಗೆ ಒದಗಿಸಿರುವ ವ್ಯಕ್ತಿ 3 ಲಕ್ಷ ರೂ.ವರೆಗೆ ನೀಡಿ ಉಳಿದ ಎರಡು ಲಕ್ಷ ಹಣವನ್ನು ಕಮಿಷನ್ ಆಗಿ ತೆಗೆದುಕೊಂಡಿದ್ದಾರೆ. ಚೆಕ್‌ಗಳನ್ನೂ ಪಡೆದಿದ್ದು, ತನಿಖೆ ನಡೆಯುತ್ತಿದೆ ಎಂದರು.

ದೌರ್ಜನ್ಯ ಪ್ರಕರಣ-ಕಾನೂನು ಪ್ರಕಾರ ತನಿಖೆಗೆ ಒತ್ತಾಯ

ಕಾವೂರು ಪೊಲೀಸ್ ಠಾಣೆಯಲ್ಲಿ ಒಂದೇ ಸಮುದಾಯದ ಎರಡು ಕುಟುಂಬಗಳ ನಡುವಿನ ದೌರ್ಜನ್ಯ ಪ್ರಕರಣದಲ್ಲಿ ಯುವಕ ಹಾಗೂ ಆತನ ತಾಯಿ ಮೇಲೆ ಹಲ್ಲೆ, ನಿಂದನೆ ಪ್ರಕರಣ ನಡೆದಿದ್ದರೂ ಠಾಣಾ ಅಧಿಕಾರಿಗಳು ನೊಂದವರ ದೂರು ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆನಂದ್ ಎಸ್.ಪಿ. ದೂರಿದರು.

ಪ್ರಕರಣದ ಬಗ್ಗೆ ಮಾತನಾಡಿದ ಎಸಿಪಿ ಶ್ರೀಕಾಂತ್, ಒಂದೇ ಸಮುದಾಯದ ಎರಡು ಕುಟುಂಬಗಳ ನಡುವಿನ ಯುವಕ ಯುವತಿಯ ಪ್ರೇಮ ಪ್ರಸಂಗವಾದ ಕಾರಣ ಪ್ರಕರಣ ದಾಖಲಿಸಿರಲಿಲ್ಲ ಎಂದರು.

ಕಾನೂನು ಪ್ರಕಾರ ತನಿಖೆ ಮಾಡಿ, ಈ ರೀತಿ ಅನ್ಯಾಯವಾಗಿ ಯಾರೊಬ್ಬರ ಮೇಲೂ ದೌರ್ಜನ್ಯ, ಹಲ್ಲೆ ನಡೆಸುವ ಕಾರ್ಯ ಆಗಬಾರದು ಎಂದು ಆನಂದ್ ಒತ್ತಾಯಿಸಿದಾಗ,  ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಡಿಸಿಪಿ ಸಿದ್ಧಾಥ್‌ರ್ ಗೋಯಲ್ ಸೂಚನೆ ನೀಡಿದರು.

ಎಸ್‌ಟಿಎಸ್‌ಟಿ ಅನುದಾನ ದುರುಪಯೋಗ ಆರೋಪ:

ಮುಲ್ಕಿಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಕಾಲನಿ ಅಭಿವೃದ್ಧಿ ಹೆಸರಿನಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಪ್ರಯತ್ನಿಸಲಾಗಿತ್ತು. ಆದರೆ ನೈಜವಾಗಿ ಅದು  ಎಸ್‌ಸಿ ಎಸ್‌ಟಿ ಕಾಲನಿ ಅಲ್ಲ ಎಂದು ದಲಿತ ಮುಖಂಡರು ಸಂಬಂಧಪಟ್ಟಇಲಾಖೆಯ ಗಮನ ಸೆಳೆದ ಹಿನ್ನೆಲೆಯಲ್ಲಿ ಸದ್ಯ ಕಾಮಗಾರಿ ತಡೆ ಹಿಡಿಯಲಾಗಿದೆ. ಈ  ರೀತಿಯಾಗಿ ದಲಿತ ಸಮುದಾಯದ ಮೀಸಲು ಹಣ ಪೋಲಾಗದಂತೆ ಇಲಾಖೆಗಳು ಎಚ್ಚರಿಕೆ ವಹಿಸಬೇಕು ಎಂದು ಆನಂದ್ ಎಸ್.ಪಿ. ಹೇಳಿದರು.

ಪ್ರಕರಣದ ಬಗ್ಗೆ ಸ್ಥಳ ತನಿಖೆ ಮಾಡಿದಾಗ ಆ ಕಾಲನಿಯಲ್ಲಿ ನಿಗದಿತ ದಲಿತ ಸಮುದಾಯದ ಜನಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು.

ಸಭೆಯಲ್ಲಿ ಡಿಸಿಪಿ ರವಿಶಂಕರ್, ಎಎಸ್ಪಿ ರಾಜೇಂದ್ರ, ಪ್ರಭಾರ ಎಎಸ್ಪಿ ಮನೀಷಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article