
ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಿ: ಜಿತು ನಿಡ್ಲೆ
Friday, February 28, 2025
ಮಂಗಳೂರು: ವಿದ್ಯಾರ್ಥಿ ಯುವಜನತೆಯಲ್ಲಿ ತುಳು ಸಾಹಿತ್ಯ ಓದಿನ ಬಗ್ಗೆ ಅಭಿರುಚಿ ಮೂಡಿಸುವ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಬೇಕಾಗಿದೆ. ಮೌಖಿಕ ಪರಂಪರೆಗೆ ಒಗ್ಗಿಕೊಂಡಿರುವ ತುಳುವನ್ನು ಸಾಹಿತ್ಯ ಓದಿನ ನೆಲೆಯಲ್ಲಿ ಜನಪ್ರಿಯಗೊಳಿಸಲು ಪರಿಶ್ರಮ ಅಗತ್ಯ. ಈ ನಿಟ್ಟಿನಲ್ಲಿ ತುಳು ಅಕಾಡೆಮಿಯು ಹಮ್ಮಿಕೊಂಡಿರುವ ಬಲೆ ತುಳು ಓದುಗ ಅಭಿಯಾನ ಶ್ಲಾಘನೀಯ ಎಂದು ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಮಂಗಳೂರು ವಿಭಾಗದ ಸಹಾಯಕ ನಿರ್ದೇಶಕ ಜಿತು ನಿಡ್ಲೆ ಹೇಳಿದರು.
ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗ್ರಂಥಾಲಯಕ್ಕೆ ಅಧ್ಯಯನಕ್ಕಾಗಿ ಭೇಟಿ ನೀಡಿದ ಸಂದರ್ಭದಲ್ಲಿ ‘ಅಕಾಡೆಮಿಡ್ ಒಂಜಿ ದಿನ: ಬಲೆ ತುಳು ಓದುಗ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಪತ್ರಕರ್ತ ಹಾಗೂ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ ಮಾತನಾಡಿ, ತುಳುನಾಡಿನಲ್ಲಿ ಭತ್ತದ ಬೇಸಾಯ ಕೃಷಿ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿ ಸೊಗಡಿನ ನೂರಾರು ತುಳು ಪದಗಳು ಬಳಕೆಯಿಂದ ದೂರವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಎಷ್ಟೇ ಸವಾಲುಗಳಿದ್ದರೂ ನಮ್ಮ ಮಾತೃ ಭಾಷೆಯನ್ನು ಮಾತನಾಡುವುದರಿಂದ ನಾವು ಹಿಂಜರಿಯಬಾರದು, ಜೊತೆಗೆ ಓದಿನ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ರಥಬೀದಿ ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಜ್ಯೋತಿಪ್ರಿಯಾ ಮುಖ್ಯ ಅತಿಥಿಯಾಗಿದ್ದರು. ಉಪನ್ಯಾಸಕಿ ಮಣಿ ಎಂ. ರೈ, ವಿದ್ಯಾರ್ಥಿ ಸಂಚಾಲಕ ನಿತೇಶ್ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.