
ಭಾರತೀಯ ಸ್ಟೇಟ್ ಬ್ಯಾಂಕ್ ಬಜಾಲ್ ಶಾಖೆಯ ಎಟಿಎಂ ಯಂತ್ರ ಕೂಡಲೇ ಮರುಸ್ಥಾಪನೆ ಗೊಳಿಸಲು ಡಿವೈಎಫ್ಐ ಒತ್ತಾಯ
ಮಂಗಳೂರು: ಭಾರತೀಯ ಸ್ಟೇಟ್ಬ್ಯಾಂಕ್ ಬಜಾಲ್ ಶಾಖೆಯ ಎಟಿಎಂ ಯಂತ್ರವನ್ನು ಕೂಡಲೇ ಮರುಸ್ಥಾಪನೆ ಗೊಳಿಸುವಂತೆ ಡಿವೈಎಫ್ಐ ಪ್ರಕಟಣೆಯಲ್ಲಿ ಒತ್ತಾಯಿಸಿದೆ.
ಮಂಗಳೂರು ನಗರದ ಬಜಾಲ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸ್ಟೇಟ್ಬ್ಯಾಂಕ್ ಬಜಾಲ್ ಶಾಖೆಯ ಎಟಿಎಂ ಯಂತ್ರ ಕಳೆದ ಎರಡು, ಮೂರು ತಿಂಗಳಿನಿಂದ ದುಸ್ಥಿತಿಯಲ್ಲಿದ್ದು, ಜನರ ಬಳಕೆಗೆ ಸಿಗದೇ ಇರೋದರ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಎಟಿಎಮ್ ಯಂತ್ರ ಅಳವಡಿಸಲು ಒತ್ತಾಯಿಸಿ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಶಾಖೆಯ ರೀಜನಲ್ ಅಧಿಕಾರಿಗಳಿಗೆ ಡಿವೈಎಫ್ಐ ಬಜಾಲ್ ಘಟಕದ ನಿಯೋಗವು ಜ.2, 2025 ರಂದು ಮನವಿಯನ್ನು ಸಲ್ಲಿಸಿತ್ತು.
ಈ ಬಗ್ಗೆ ಸ್ಪಂಧಿಸಿದ ಮೇಲಾಧಿಕಾರಿಗಳು ಅಲ್ಲಿಗೆ ಎಟಿಎಮ್ ಯಂತ್ರವನ್ನು ಕೂಡಲೇ ಮರುಸ್ಥಾಪಿಸುವ ಕುರಿತು ಭರವಸೆಯನ್ನು ನೀಡಿದ್ದರು. ಸದ್ರಿ ಹೊಸತೊಂದು ಎಟಿಎಂ ಯಂತ್ರ ಬಜಾಲ್ ಶಾಖೆಗೆ ತಲುಪಿರುತ್ತದೆ ಆದರೆ ಅದರ ಮರುಸ್ಥಾಪನೆ ಸೇರಿದಂತೆ ಎಟಿಎಂ ಕೇಂದ್ರದ ನವೀಕರಣ ಕೆಲಸಗಳನ್ನು ಇನ್ನು ಬಾಕಿ ಇರಿಸಿ ಈ ವರೆಗೂ ಅದರ ಕಾರ್ಯನಿರ್ವಹಣೆ ಕೆಲಸಗಳನ್ನು ಖಾತ್ರಿ ಪಡಿಸಲು ಸಾಧ್ಯವಾಗಿಲ್ಲ.
ಈಗಾಗಲೇ ಎಟಿಎಂ ಯಂತ್ರ ಬಜಾಲ್ ಶಾಖೆಗೆ ತಲುಪಿದ್ದರೂ ಈ ವರೆಗೂ ಅದನ್ನು ಮರು ಜೋಡಿಸದೆ ಕಾರ್ಯನಿರ್ವಹಣೆಗೊಳಿಸಲು ಸಾಧ್ಯವಾಗದೇ ಇರುವ ಕಾರಣದಿಂದ ಈ ಬ್ಯಾಂಕಿನ ಗ್ರಾಹಕರು ಮತ್ತು ಸ್ಥಳೀಯರು ಆಕ್ರೋಶಿತರಾಗಿರುತ್ತಾರೆ. ಕಳೆದ ಕೆಲವು ತಿಂಗಳುಗಳಿಂದ ಎಟಿಎಂ ಯಂತ್ರದ ಸೇವೆ ಲಭಿಸದೆ ತುರ್ತು ಸಂದರ್ಭದಲ್ಲಿ ಎಟಿಎಂ ಮೂಲಕ ಹಣ ಪಡೆಯಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಗ್ರಾಹಕರು ಖೇದ ವ್ಯಕ್ತಪಡಿಸಿದ್ದರು.
ಈ ಎಲ್ಲಾ ಹಿನ್ನಲೆಯಲ್ಲಿ ಈ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಬಜಾಲ್ ಶಾಖೆಯ ಎಟಿಎಮ್ ಕೇಂದ್ರವನ್ನು ನವೀಕರಣ ಸಹಿತ ಮರು ಸ್ಥಾಪಿಸುವ ಕೆಲಸಗಳನ್ನು ಆದಷ್ಟು ಬೇಗ ಕೈಗೊಂಡು ಗ್ರಾಹಕರ ಬಳಕೆಗೆ ಸಿಗುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಡಿವೈಎಫ್ಐ ಬಜಾಲ್ ಘಟಕವು ಫೆ.24 ರಂದು ಪೋಸ್ಟ್ ಕಾರ್ಡ್ ಚಳುವಳಿಯನ್ನು ಹಮ್ಮಿಕೊಂಡಿದೆ ಎಂದು ಡಿವೈಎಫ್ಐ ಬಜಾಲ್ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.