
ಎಟಿಎಮ್ ಯಂತ್ರ ಕೂಡಲೇ ಮರುಸ್ಥಾಪನೆ ಗೊಳಿಸಲು ಡಿವೈಎಫ್ಐನಿಂದ ರೀಜನಲ್ ಅಧಿಕಾರಿಗೆ ಪೋಸ್ಟ್ ಕಾರ್ಡ್ ಚಳುವಳಿ
Monday, February 24, 2025
ಮಂಗಳೂರು: ಬಜಾಲ್ ಶಾಖೆಯ ಎಟಿಎಮ್ ಕೇಂದ್ರವನ್ನು ನವೀಕರಣ ಸಹಿತ ಮರು ಸ್ಥಾಪಿಸುವ ಕೆಲಸಗಳನ್ನು ಆದಷ್ಟು ಬೇಗ ಕೈಗೊಂಡು ಗ್ರಾಹಕರ ಬಳಕೆಗೆ ಸಿಗುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಡಿವೈಎಫ್ಐ ಬಜಾಲ್ ಘಟಕವು ಇಂದು ಬಜಾಲ್ ಅಂಚೆ ಕಚೇರಿ ಮುಂಭಾಗ ಪೋಸ್ಟ್ ಕಾರ್ಡ್ ಚಳುವಳಿಯನ್ನು ಹಮ್ಮಿಕೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಈ ಭಾಗದ ಜನರ ನಿರಂತರ ಒತ್ತಡದ ನಂತರ ಹೊಸದಾದ ಎಟಿಎಮ್ ಯಂತ್ರ ಬಜಾಲ್ ಶಾಖೆಗೆ ಬಂದು ತಲುಪಿದೆ ಆದರೆ ಅದನ್ನು ಮರುಸ್ಥಾಪಿಸಲು ಬೇಕಾದ ಕ್ರಮ ಜರುಗಿಸದೆ ವಿಳಂಬ ನೀತಿ ಅನುಸರಿಸೋದರಿಂದ ಸ್ಥಳೀಯ ಗ್ರಾಹಕರು, ಸಣ್ಣ ಪುಟ್ಟ ವ್ಯಾಪಾರಸ್ತರು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಡಿವೈಎಫ್ಐ ಸಂಘಟನೆ ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರುವ ಸಲುವಾಗಿ ಪೋಸ್ಟ್ ಕಾರ್ಡ್ ಚಳುವಳಿಗೆ ಚಾಲನೆ ನೀಡಿದೆ ಅಧಿಕಾರಿಗಳು ಈ ಕೂಡಲೇ ಕೇಂದ್ರದ ಮರುಸ್ಥಾಪನೆಗೆ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಫ್ಐ ನಗರ ಅಧ್ಯಕ್ಷ ಜಗದೀಶ್ ಬಜಾಲ್, ಸ್ಥಳೀಯ ಮುಖಂಡರುಗಳಾದ ಪ್ರಕಾಶ್ ಶೆಟ್ಟಿ, ದೀಕ್ಷಿತ್ ಭಂಡಾರಿ, ವರಪ್ರಸಾದ್, ಜಯಪ್ರಕಾಶ್ ಜಲ್ಲಿಗುಡ್ಡೆ, ಅನ್ಸಾರ್ ಬಜಾಲ್, ಅಶೋಕ್ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತರಾದ ಲಾರೆನ್ಸ್ ಡಿಸೋಜ, ಸಿರಿಲ್ ಡಿಸೋಜ, ಉದ್ಯಮಿ ಪ್ರವೀಣ್ ಫಿಗ್ರೇಡಾ, ಶೃತಿ, ಚಿತ್ರಾ, ಯೋಗಿತಾ ಮತ್ತಿತರರು ಉಪಸ್ಥಿತರಿದ್ದರು. ದೀಪಕ್ ಬಜಾಲ್ ಸ್ವಾಗತಿಸಿ, ನಿರೂಪಿದರು.