
ಸೂಕ್ತ ಚಿಕಿತ್ಸೆಯಿಂದ ವ್ಯಸನ ಮುಕ್ತರಾಗಲು ಸಾಧ್ಯ: ಡಾ.ಕ್ಯಾರೋಲಿನ್
ಆಳ್ವಾಸ್ ‘ಪುನರ್ಜನ್ಮ’ ಕೇಂದ್ರದ 5ನೇ ವಾರ್ಷಿಕೋತ್ಸವ
ಮೂಡುಬಿದಿರೆ: ‘ಸೂಕ್ತ ಚಿಕಿತ್ಸೆ ಮತ್ತು ಕುಟುಂಬಸ್ಥರ ಸಹಕಾರದಿಂದ ಯಾವುದೇ ವ್ಯಕ್ತಿ ವ್ಯಸನ ಮುಕ್ತರಾಗಲು ಸಾಧ್ಯ’ ಎಂದು ತಜ್ಞ ಮನೋವೈದ್ಯೆ ಡಾ.ಕ್ಯಾರೋಲಿನ್ ಡಿ’ಸೋಜಾ ಹೇಳಿದರು.
ಶೋಭಾವನದ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಸಭಾಂಗಣದಲ್ಲಿ ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದ ಐದನೇ ವರ್ಷದ ವಾರ್ಷಿಕೋತ್ಸವ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ, ಮನೋಸಮೃದ್ಧಿ-ಆಳ್ವಾಸ್ ಸೈಕಾಲಜಿ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವ್ಯಸನವು ಕೇವಲ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬಿರುವುದಿಲ್ಲ. ಬದಲಾಗಿ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಅಪರೂಪಕ್ಕೆ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಅಲ್ಲ ಎಂಬುದು ಕೆಲವರ ವಾದ. ಆದರೆ ವ್ಯಸನವು ತನ್ನಿಂದತಾನೆ ಬೆಳೆದುಕೊಳ್ಳುತ್ತದೆ. ಒಮ್ಮೆ ಮದ್ಯಪಾನಕ್ಕೆ ಆಕರ್ಷತಾರಾದರೆ ನಮ್ಮ ಸ್ನೇಹಿತರು, ಸುತ್ತಮುತ್ತಲಿನವರ ಸಂಘದಿಂದ ವ್ಯಸನಕ್ಕೆ ಒಳಗಾಗಬಹುದು ಎಂದು ಎಚ್ಚರಿಸಿದರು.
ಸಮಾಜವು ವ್ಯಕ್ತಿಯನ್ನು ಗುಣಕ್ಕಿಂತ ಹೆಚ್ಚಾಗಿ ಚಟದ ಮೂಲಕ ಗುರುತಿಸುತ್ತದೆ. ಹೀಗಾಗಿ ವ್ಯಕ್ತಿ ವ್ಯಸನ ಮುಕ್ತಾರಾದರೂ ಸಾಧಾರಣ ಬದುಕಿಗೆ ಬರಲು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾರೆ ಎಂದರು.
ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ನಮ್ಮ ಗೆಳೆಯರು ಹಾಗೂ ಪರಿಸರವು ನಮ್ಮ ಅಭ್ಯಾಸಗಳ ಮೇಲೆ ಪರಿಣಾಮ ಬೀರುತ್ತದೆ. ವ್ಯಸನ ಮುಕ್ತಾರಾಗಲು ಇರುವ ಪ್ರಮುಖ ಮಾರ್ಗವೆಂದರೆ ನಾವು ಮದ್ಯಪಾನ ಅಥವಾ ಇತರ ವಸ್ಯನವಿರುವ ವ್ಯಕ್ತಿಗಳಿಂದ ದೂರವಿರುವುದು ಎಂದರು.
ವ್ಯಸನಿಗಳ ಸಂಘದಿಂದ ನಾವೂ ವ್ಯಸನಿಗಳಾಗಬಹುದು. ಅದಕ್ಕಾಗಿ ನಾವು ಉತ್ತಮ ಹವ್ಯಾಸ, ಸಕಾರಾತ್ಮಕ ಚಿಂತನೆಗಳಿರುವ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸುವ ವ್ಯಕ್ತಿಗಳ ಸಹವಾಸ ಮಾಡಬೇಕು ಎಂದರು.
ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ವ್ಯಸನಮುಕ್ತರಾಗಿ ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ನಾಲ್ವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುಧೀಂದ್ರ ಶಾಂತಿ ನಿರ್ದೇಶನದಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಪ್ರಹಸನ ಪ್ರದರ್ಶಿಸಿದರು. ಮನೋಸಮೃದ್ಧಿ-ಆಳ್ವಾಸ್ ಸೈಕಾಲಜಿ ಅಸೋಸಿಯೇಷನ್ನ ಲೋಗೋ ಬಿಡುಗಡೆಗೊಳಿಸಲಾಯಿತು.
ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಉಪನ್ಯಾಸಕಿ ಪ್ರೀತಿ ಶೆಟ್ಟಿಗಾರ್, ಆಳ್ವಾಸ್ ಪುನರ್ಜನ್ಮದ ಸಮಗ್ರ ವೈದ್ಯಕೀಯ ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ.ವಿನಯ್ ಆಳ್ವ, ಆಳ್ವಾಸ್ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪುನರ್ಜನ್ಮದ ಮನೋವೈದ್ಯ ಡಾ.ಅನಿರುದ್ಧ್ ಶೆಟ್ಟಿ ಇದ್ದರು.
ಆಳ್ವಾಸ್ ಪುನರ್ಜನ್ಮದ ಆಪ್ತ ಸಮಾಲೋಚಕ ಲೋಹಿತ್ ಬಂಟ್ವಾಳ ನಿರೂಪಿಸಿ, ಆಳ್ವಾಸ್ ಬೆಳಕು ಕೌನ್ಸಿಲಿಂಗ್ ಕೇಂದ್ರದ ಆಪ್ತ ಸಮಾಲೋಚಕಿ ರೆನಿಟಾ ಡಿಸೋಜಾ ಸ್ವಾಗತಿಸಿ, ಮುಝಾಮಿಲ್ ಅಹ್ಮದ್ ವಂದಿಸಿದರು. ಸಹಾಯಕ ಪ್ರಾಧ್ಯಪಕಿ ಜೋಸ್ವಿಟಾ ವಾರ್ಷಿಕ ವರದಿ ವಾಚಿಸಿದರು.